ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರಗೊಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೆಂಗಳೂರಿನ ಪಾಲಿಗೆ ಕೊರೋನಾ ಭಸ್ಮಾಸುರನಾಗವುದರಲ್ಲಿ ಸಂಶಯವೇ ಇಲ್ಲ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ರಣಕೇಕೆ ನೋಡಿದರೆ ಮೈ ನಡುಗುತ್ತಿದೆ.ದುಡ್ಡಿದ್ದರೂ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಗಳೂರಿನಲ್ಲಿ ಕೊರೋನಾ ಸೋಂಕು ಬಂದ್ರೆ ನೇರವಾಗಿ ಯಮಪುರಿಗೆ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಕ್ಸಿಜನ್ ಇಲ್ಲದೆ ಜನ ಸಾಯುವಂತಾಗಿದೆ. ಆದರೆ ಆರೋಗ್ಯ ಸಚಿವ ಸುಧಾಕರ್ ಮಾತ್ರ ಆಕ್ಸಿಜನ್ ಕೊರೆತೆ ಇಲ್ಲ ಅನ್ನುತ್ತಿದ್ದಾರೆ. ಇದಕ್ಕೊಂದು ನಿದರ್ಶನ ಅನ್ನುವಂತೆ ಪತ್ರಕರ್ತ ಮಾರುತೇಶ್ ತಮ್ಮದೊಂದು ಅನುಭವವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಹಳ ನೋವಿನಿಂದ ಬರೆಯುತ್ತಿದ್ದೇನೆ.. Of course ಬರೆಯಲೇಬೇಕು ಅನಿಸಿತು..

ಇದನ್ನ ಬರೆಯಲು ಶುರುಮಾಡಿದಾಗ ಬೆಳಗಿನ ಜಾವ 2 ಗಂಟೆ 36 ನಿಮಿಷ. ಅದೊಂದು ಘಟನೆ ಹಾರ್ಟ್ ಗೆ ಕೈ ಹಾಕಿ ಹಿಂಡಿದಂತಾಯ್ತು. ಆಗಿದ್ದಿಷ್ಟು… ಬೆಂಗಳೂರಿನ ಇಂದಿರಾನಗರದ ಇಎಸ್ ಐ ಆಸ್ಪತ್ರೆಯ ಗೇಟ್ ಬಳಿ.. ಗಂಟಲಿನ ಕೊಳವೆಗೆ ಪೈಪ್ ಹಾಕಿದ್ದಾರೆ.. ಆಕ್ಸಿಜನ್ ಹರಿಯುತ್ತಾ ಇದೆ.. ಇತ್ತ ಇನ್ನೊಂದು ತಾಸು ಆಕ್ಸಿಜನ್ ಸಿಲಿಂಡರ್ ಖಾಲಿ ಆಗಬಹುದು ಸರ್ ಅಂತಿದ್ದ ಆಂಬ್ಯುಲೆನ್ಸ್ ಡ್ರೈವರ್. ಆಂಬ್ಯುಲೆನ್ಸ್ ಬಳಿಗೆ ಹೋಗಿ ನೋಡಿದರೆ ಕುಯ್ ಕುಯ್ ಸದ್ದಿನ ನಡುವೆ 45 ವರ್ಷದ ಕೊರೋನಾ ಸೋಂಕಿತನ ಏದುಸಿರು ಕಪಾಳಕ್ಕೆ ಹೊಡೆದಂತೆ ಅನುಭವಕ್ಕೆ ಬರ್ತಿತ್ತು. ಇತ್ತ ಸೋಂಕಿತನ ಸಂಬಂಧಿಕರ ಆಕ್ರಂದನ ವ್ಯವಸ್ಥೆಯ ಅವ್ಯವಸ್ಥೆ ತೋರಿಸ್ತಿತ್ತು. ಏನು ಮಾಡುವುದು..?
ಮಾಜಿ ಸಿಎಂಗೆ ಕರೆ ಮಾಡಿ ಬೆಡ್ ವ್ಯವಸ್ಥೆ ಮಾಡುವ ಆರೋಗ್ಯ ಸಚಿವರು ಈ ಸೋಂಕಿತನಿಗೆ ಬೆಡ್ ಕೊಡಿಸ್ತಾರೆ ಅಂದುಕೊಳ್ಳಲೋ..? ಅಥವಾ ಕೋವಿಡ್ ಸಹಾಯವಾಣಿಯವರು ಒಂದು ಗಂಟೆಯಲ್ಲಿ ಹೋಗುವ ಉಸಿರನ್ನ ತಡೆದು ICU ಬೆಡ್ ವ್ಯವಸ್ಥೆ ಮಾಡ್ತಾರೆ ಅಂದುಕೊಳ್ಳಲೋ..? ಒಂದೂ ತಿಳಿಯದಂತಾಯ್ತು. ವರದಿ ಮಾಡಲು ಬಂದವರು ಅಷ್ಟೇ ಮಾಡಬೇಕು ಅಂತೇನಿಲ್ಲವಲ್ಲ ಎಂದುಕೊಂಡು 1912 ಕೊರೋನಾ ಸಹಾಯವಾಣಿಗೆ ಕರೆ ಮಾಡಿದೆ.. ಆದರೆ ಎಲ್ಲೂ ಬೆಡ್ ಇಲ್ಲ ಎಂಬ ಉತ್ತರ ಬಂತು. ಅಯ್ಯೋ ಖಾಸಗಿಯವರು ಸರ್ಕಾರದ ಜೊತೆ ಟೈಅಪ್ ಆಗಿರುವ ಆಸ್ಪತ್ರೆಯಲ್ಲಿ ಕೇಳಿನೋಡಿ ಅಂತ ಗೋಗರೆದೆ.. ಎರಡು ನಿಮಿಷ ಲೈನಲ್ಲಿರಿ ಎಂದವರು ಮತ್ತೆ ಹೇಳಿದ ಉತ್ತರ ಕೇಳಿದ ನನಗೆ ಬೆಂಗಳೂರಿನ ಕೊರೋನಾ ಕರಾಳತೆ ಮತ್ತೊಮ್ಮೆ ಮನದಟ್ಟು ಮಾಡಿತು..
ಸರ್ ಸರ್ಕಾರಿ ಆಸ್ಪತ್ರೆಗಳಲ್ಲೂ ಇಲ್ಲ.. ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್ ಇಲ್ಲ.. ಯಾರಾದ್ರು ಡಿಸ್ಚಾರ್ಜ್ ಆದರೆ ಬೆಡ್ ಸಿಗತ್ತೆ ಅಂದ್ರು. (ಸಾಕ್ಷಿಗೆ ಆಡಿಯೋ ಇದೆ) ಇತ್ತ ಆಕ್ಸಿಜನ್ ಖಾಲಿಯಾಗ್ತಿದೆ, ಇನ್ನೊಂದು ಗಂಟೆಯಲ್ಲಿ ಹೋಗುವ ಜೀವಕ್ಕೆ ಮತ್ತೊಬ್ಬರು ಡಿಸ್ಚಾರ್ಜ್ ಆಗುವ ತನಕ ಕಾಯಲು ಸಾಧ್ಯವಿದೆಯೇ..? ನಮ್ಮ ಕಣ್ಣೆದುರೇ ಜೀವ ಹೋಗಿ ಬಿಡಬಹುದೇನೋ ಅನ್ನೋ ಭಯ ಶುರುವಾಯ್ತು. ಬೇರೆ ಬೇರೆ ಆಸ್ಪತ್ರೆಗಳಿಗೆ ಕರೆ ಮಾಡಿ ಬೆಡ್ ಕೇಳಿದರೆ ಎಲ್ಲೂ ICU ಬೆಡ್ ಸಿಗಲಿಲ್ಲ. ಕೊನೆಗೆ ದೇವರ ತರ ನೆನಪಾಗಿದ್ದು ಕೆಸಿ ಜನರಲ್ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಡಾ. ವೆಂಕಟೇಶಯ್ಯ. ಮಧ್ಯರಾತ್ರಿ ಆದ್ರೂ ಕಾಲ್ ರಿಸೀವ್ ಮಾಡಿ ಮಾತನಾಡಿದರು ನಮ್ಮಲ್ಲೂ ಭರ್ತಿಯಾಗಿದೆ ಅಂದರು.. ಸೋಂಕಿತನ ಕಥೆ ಮುಗೀತು ಅಂತಲೇ ಭಾವಿಸಿದ್ದೆ.. ಮತ್ತೆ ಕರೆ ಮಾಡಿ.. ಸರ್ ಬಹಳ ಕ್ರಿಟಿಕಲ್ ಇದೆ. ನೀವು ಏನಾದರೂ ವ್ಯವಸ್ಥೆ ಮಾಡದೇ ಇದ್ದರೆ ಜೀವ ಹೋಗೋದು ಗ್ಯಾರಂಟಿ ಅಂದೆ. ಬಹುಶಃ ಅವರದ್ದು ಮನುಷ್ಯ ಹೃದಯ ಅನಿಸತ್ತೆ. ಅದಕ್ಕೆ ನನ್ನ ಮಾತು ಹೃದಯಕ್ಕೆ ಬಡಿದಂತಾಗಿದೆ. ಏನೇನೋ ಪ್ರಯತ್ನಗಳನ್ನ ಮಾಡಿ ಕರೆ ಮಾಡಿದ್ರು
ಇಂದಿರಾನಗರದಿಂದ ಆಂಬ್ಯುಲೆನ್ಸ್ ಮೂವ್ ಮಾಡಿಸಿ ವ್ಯವಸ್ಥೆ ಮಾಡಿಸ್ತೇನೆ ಅಂದರು.. ತಕ್ಷಣ ಆಂಬ್ಯುಲೆನ್ಸ್ ಹೊರಟಿತು ಸೋಂಕಿತ ದಾಖಲಾದಾಗ ರಾತ್ರಿ 2.08 ನಿಮಿಷ. ಅವರಿಗೊಂದು ಕೈ ಮುಗಿದು ಮೆಸೇಜ್ ಕಳಿಸಿದೆ. ಯಾಕಂದ್ರೆ ನಮಗೆ ದೇವರ ತರ ಕಂಡಿದ್ದು ಅವರೊಬ್ಬರೇ. ರೋಗಿಯ ಸಂಬಂಧಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಸೋಂಕಿತ ಗುಣಮುಖ ಆಗಲೀ ಅಂತ ಪ್ರಾರ್ಥನೆ ಮಾಡೋಣ.
ಇಷ್ಟೆಲ್ಲಾ ಬರೆದಿದ್ದು ಯಾಕೆ ಗೊತ್ತಾ..? ಬೆಂಗಳೂರಿನ ಸದ್ಯದ ಪರಿಸ್ಥಿತಿ ಎಲ್ಲರಿಗೂ ಅರ್ಥವಾಗಲೀ ಅಂತ. ಪರಿಸ್ಥಿತಿ ಏನೂ ಆಗಿಲ್ಲ ಅನ್ನೋ ಭ್ರಮೆಯಲ್ಲಿದ್ದರೆ ಅದರಿಂದ ಹೊರಗೆ ಬನ್ನಿ. ICU, ವೆಂಟಿಲೇಟರ್ ಮಾತ್ರ ಕೇಳಲೇಬೇಡಿ. ದಯಮಾಡಿ ಕೋವಿಡ್ ನಿಯಮ ಪಾಲಿಸಿ. ಮೇಲೆ ಬರೆದಿರುವವರಿಗೆ ಆದ ಪರಿಸ್ಥಿತಿ ಯಾರಿಗೂ ಬಾರದಿರಲಿ..
ಇಂತಿ ನಿಮ್ಮ ಆರೋಗ್ಯದ ವಿಶ್ವಾಸಿ
– ಮಾರುತೇಶ್ ಹುಣಸನಹಳ್ಳಿ..
Discussion about this post