ಬೆಂಗಳೂರು : ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅಪಮಾನ ಮಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.
ತಮ್ಮ ಸಮಾಜಕ್ಕೆ ನೋವಾದ ಸಂದರ್ಭದಲ್ಲಿ, ಅಪಮಾನವಾದ ಸಂದರ್ಭದಲ್ಲಿ ಆ ಸಮುದಾಯ ಸಿಡಿದೇಳುವುದು ಸಹಜ.
ಈ ನಡುವೆ ಬ್ರಾಹ್ಮಣರಿಗೆ ಆಗಿದೆ ಎನ್ನಲಾದ ಅವಮಾನದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಬ್ರಾಹ್ಮಣ ಸಂಘಟನೆಗಳಿಂದ ಪ್ರತಿಭಟನೆ ಕೂಡಾ ನಡೆಯಿತು.
ನಿರ್ದೇಶಕ ಈಗಾಗಲೇ ಕ್ಷಮೆ ಕೇಳಿದ್ದಾರೆ, ಆದರೆ ನಮಗೆ ಕ್ಷಮೆ ಕೇಳಿದರೆ ಸಾಲದು, ಅವಮಾನ ಮಾಡಿದ ದೃಶ್ಯಗಳನ್ನು ತೆಗೆಯಬೇಕು ಅನ್ನುವುದು ಪ್ರತಿಭಟನಕಾರರ ಒತ್ತಾಯ. ಇದಕ್ಕಾಗಿ ನಾಳೆಯ ತನಕ ಗಡುವು ಕೂಡಾ ವಿಧಿಸಲಾಗಿದೆ.
ಇದೀಗ ಹೋರಾಟಕ್ಕೆ ಮಣಿದಿರುವ ಚಿತ್ರತಂಡ ಸೆನ್ಸಾರ್ ಮಂಡಳಿಯ ಮೊರೆ ಹೋಗಲು ನಿರ್ಧರಿಸಿದೆ.
ಹಾಗೇ ನೋಡಿದರೆ ತಮ್ಮ ಸಮುದಾಯಕ್ಕೆ ಆಗಿರುವ ಅವಮಾನದ ವಿರುದ್ಧ ದನಿ ಎತ್ತಿರುವ ಬ್ರಾಹ್ಮಣ ಸಮುದಾಯಗಳು ಪ್ರತಿಭಟನೆ ನಡೆಸಬೇಕಾಗಿರುವುದು ಸೆನ್ಸಾರ್ ಮಂಡಳಿ ವಿರುದ್ಧ.
ಸಮುದಾಯವೊಂದಕ್ಕೆ ನೋವಾಗುವ ವಿಷಯಗಳಿದ್ದರೂ ಅದಕ್ಕೆ ಕತ್ತರಿ ಪ್ರಯೋಗಿಸದ ಸೆನ್ಸಾರ್ ಮಂಡಳಿ ಇದ್ದರೆಷ್ಟು ಬಿಟ್ಟರೆಷ್ಟು. ಚಿತ್ರತಂಡದವರು ಕಥೆಗೆ ಅನುಗುಣವಾಗಿ ಚಿತ್ರ ನಿರ್ಮಿಸುತ್ತಾರೆ.
ಆದರೆ ಸಾಧಕ ಬಾಧಕಗಳನ್ನು ನಿರ್ಧರಿಸಲು ಇರುವುದೇ ಸೆನ್ಸಾರ್ ಮಂಡಳಿ. ಸೆನ್ಸಾರ್ ಮಂಡಳಿಗೆ ಈ ವಿಷಯದಲ್ಲಿ ಸೆನ್ಸ್ ಇಲ್ಲದೆ ಹೋಗಿದೆ ಅಂದರೆ ಪ್ರತಿಭಟನೆ ನಡೆಯಬೇಕಾಗಿರುವುದು ಸೆನ್ಸಾರ್ ಮಂಡಳಿ ವಿರುದ್ಧ.
ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗುವ ವಿಷಯಗಳಿದ್ದರೂ ನೀವು ಆ ದೃಶ್ಯಗಳಿಗೆ ಅನುಮತಿ ಕೊಟ್ಟಿದ್ದು ಹೇಗೆ ಎಂದು ಅವರನ್ನು ಪ್ರಶ್ನಿಸಬೇಕು ತಾನೇ. ಅದನ್ನು ಬಿಟ್ಟು ಚಿತ್ರತಂಡದ ಕುತ್ತಿಗೆ ಹಿಡಿದರೆ ಅವರೇನು ಮಾಡುತ್ತಾರೆ.
ಇಂದು ಬ್ರಾಹ್ಮಣ ಸಮುದಾಯ ನಾಳೆ ಮತ್ತೊಂದು ಸಮುದಾಯ ಹೋರಾಟಕ್ಕೆ ಮುಂದಾದ್ರೆ ಮೊದಲೇ ಸಂಕಷ್ಟದಲ್ಲಿರುವ ಚಂದನವನದ ಕಥೆಯೇನಾಗಬೇಕು.
ಬದಲಾಗಿ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಸೆನ್ಸಾರ್ ಮಂಡಳಿ ಎಚ್ಚರವಾಗಿರಬೇಕು. ಯಾಕಂದ್ರೆ ಚಿತ್ರದ ನಿರ್ಮಾಪಕ, ನಿರ್ದೇಶಕ, ನಾಯಕನಷ್ಟು ಒತ್ತಡದಲ್ಲಿ ಸೆನ್ಸಾರ್ ಮಂಡಳಿ ಇರೋದಿಲ್ಲ.
Discussion about this post