ಬೆಂಗಳೂರು : ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಂಗಗಳ ಕಾಟದಿಂದ ಕೃಷಿಕರು ಕಂಗಲಾಗಿ ಹೋಗಿದ್ದಾರೆ.
ಒಂದು ಗುಂಪು ತೋಟಕ್ಕೆ, ಗದ್ದೆಗೆ ನುಗ್ಗಿತು ಅಂದ್ರೆ ರೈತರ ಬದುಕು ಸರ್ವನಾಶವಾಯ್ತು ಎಂದೇ ಅರ್ಥ.
ರೈತರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಮಂಗಗಳ ಕಾಟ ತಡೆಯಲು ಯಡಿಯೂರಪ್ಪ ಸರ್ಕಾರ ಸೂಪರ್ ಡೂಪರ್ ಯೋಜನೆಯೊಂದನ್ನು ಸಂಶೋಧಿಸಿದೆ. ಹಾಗಂತ ಇದು ಯಡಿಯೂರಪ್ಪ ಅವರ ಯೋಜನೆಯಲ್ಲ. ಬದಲಿಗೆ ಐಎಎಸ್ , ಐಎಫ್ಎಸ್ ಅಧಿಕಾರಿಗಳ ಸಂಶೋಧನೆ.
ಅಧಿಕಾರಿಗಳು ಕೊಟ್ಟ ಸಲಹೆಯನ್ನು ಹಾಗೇ ಜಾರಿ ಮಾಡಲು ಹೊರಟ ಮಂತ್ರಿಗಳ ತಲೆಯಲ್ಲಿ ಏನಿದೆ ಅನ್ನುವುದೇ ಈಗಿನ ಕುತೂಹಲ.
ಈಗಿನ ಯೋಜನೆಯ ಪ್ರಕಾರ ಮಲೆನಾಡಿನಲ್ಲಿರುವ ಮಂಗಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುತ್ತಾರಂತೆ. ಈ ಮೂಲಕ ಮಂಗಗಳ ಸಂಖ್ಯೆಯನ್ನು ನಿಯಂತ್ರಿಸಲಾಗುತ್ತದೆಯಂತೆ.
ಜೊತೆಗೆ ಗಂಡು ಮಂಗಗಳಿಗೆ ಮಾತ್ರ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಪೇಪರ್ ನಲ್ಲಿರುವ ಯೋಜನೆಯನ್ನು ನೋಡಿದ್ರೆ ಮರದಿಂದ ಮರಕ್ಕೆ ಹಾರುವ ಮಂಗಗಳ ಗುಂಪಿನಲ್ಲಿರುವ ಗಂಡು ಮಂಗಗಳನ್ನು ಹಿಡಿಯಲು ಅರಣ್ಯ ಸಚಿವರು, ಐಎಎಸ್, ಐಎಫ್ಎಸ್ ಅಧಿಕಾರಿಗಳೇ ಹೋಗುವಂತಿದೆ.
ಬೀದಿ ನಾಯಿಗಳನ್ನು ನಿಯಂತ್ರಿಸುವ ಸಲುವಾಗಿ ಪ್ರಾರಂಭಿಸಿರುವ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನೇ ಮುಗಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅಂದ ಮೇಲೆ ಮಂಗಗಳನ್ನು ಹಿಡಿಯಲು ಸಾಧ್ಯವೇ.
ಈ ಬಗ್ಗೆ ಪತ್ರಕರ್ತ ರಾಘವೇಂದ್ರ ಭಟ್ ತಮ್ಮ ಫೇಸ್ ಬುಕ್ ನಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ ಮಲೆನಾಡು ಭಾಗದಲ್ಲಿ ಮಂಗಗಳ ಹಾವಳಿ ತಡೆಯುವ ವಿಚಾರವನ್ನು ಈ ಸರಕಾರಿ ಅಧಿಕಾರಿಗಳು ತುಂಬಾ ಸರಳವಾಗಿ ತೆಗೆದುಕ್ಕೊಂಡಂತೆ ಕಾಣುತ್ತದೆ. ಅಥವಾ ಅವರ ಈ ಹುಚ್ಚು ನಿರ್ಧಾರಗಳ ಮೂಲಕ ಜನರ ಸಮಸ್ಯೆಯ ಅಣಕ ಮಾಡುತ್ತಿರಬೇಕು. ಗಂಡು ಮಂಗಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುವುದು ಆ ಪೈಕಿ ಒಂದಂತೆ. ರೀ ಐಎಎಸ್, ಐಎಫ್ ಎಸ್ ಮಹಾನುಭಾವರುಗಳಾ, ಮಂಗಗಳಿಗೆ ಮರಿ ಹುಟ್ಟದಂತೆ ಮಾಡುವುದು ನಿಮ್ಮ ನಿಮ್ಮ ಶ್ರೀಮತಿಯರಿಗೆ ಸಂತಾನ ಹರಣ ಆಪರೇಷನ್ ಮಾಡಿದಷ್ಟು ಸುಲಭವಲ್ಲ, ಅದಕ್ಕೆ ಇನ್ಶೂರೆನ್ಸೂ ಇಲ್ಲ. ತೋಟಕ್ಕೆ ನುಗ್ಗಿದ ಮಂಗಗಳ ಹಿಂಡನ್ನು ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರಿಸುವಷ್ಟರಲ್ಲಿ ಎಷ್ಟು ಕಷ್ಟಪಡಬೇಕೇಂಬುದು ಗೊತ್ತಾ ? ನಿಮಗೆ ಸಾಮರ್ಥ್ಯ ಇದ್ದರೆ ಒಂದೇ ಒಂದು ಮಂಗನನ್ನು ಹಿಡಿದು ಆಪರೇಷನ್ ಮಾಡಿ ಬಿಡಿ ನೋಡೋಣ ? ಸುಮ್ಮನೆ ಕಚೇರಿಯಲ್ಲಿ ಕುಳಿತು ಕಡತ ಉರಳಿಸುವುದಲ್ಲ. ಇಂದು ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಂಗಗಳ ಉಪಾದ್ವಾಪ್ಯ ಈ ಪರಿಯಾಗುವುದಕ್ಕೆ ಕಾರಣ ಅರಣ್ಯ ಇಲಾಖೆಯ ದರಿದ್ರ ಮೊನೋ ಕಲ್ಚರ್ ಅರಣ್ಯ ಕಾಮಗಾರಿಗಳೇ ಕಾರಣ. ಅಕೇಷಿಯಾ ಪ್ಲಾಂಟೇಶನ್ ಗೆ ಸುರಿದ ದುಡ್ಡನ್ನು ನೈಸರ್ಗಿಕ ಅರಣ್ಯ ರಕ್ಷಣೆಗೆ ವಿನಿಯೋಗಿಸಿದರೆ ಸಾಕಿತ್ತು. ಕಳ್ಳನಾಟ ಸಾಗಣೆ ಮಾಡುವಾಗ ಕಣ್ಣುಮುಚ್ಚಿ ಕುಳಿತುಕ್ಕೊಳ್ಳುವ ಈ ಸರಕಾರಿ ಕಳ್ಳರು ಈಗ ಮಂಗನಿಗೆ ಸಂತಾನಹರಣ ಚಿಕಿತ್ಸೆ ಮಾಡುತ್ತಾರಂತೆ. ಯಾವ ಮಂಗಪ್ಪನ ದುಡ್ಡು ಅಂದುಕ್ಕೊಂಡಿದ್ದೀರಿ… ಥೂ ಥೂ ಥೂ
ಮಂಗಗಳ ಕಾಟ ತಪ್ಪಿಸಬೇಕಾದರೆ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು. ವನಮಹೋತ್ಸವದ ನೆಪದಲ್ಲಿ ಕೋಟಿ ಕೋಟಿ ದುಡ್ಡು ಹೊಡೆಯುವ ಅಧಿಕಾರಿಗಳು ಮೊದಲು ಹಣ್ಣು ಹಂಪಲುಗಳನ್ನು ಕೊಡುವ ಗಿಡಗಳನ್ನು ಬೆಳೆಸಬೇಕು.
ಕಾಡು ಪ್ರದೇಶದಲ್ಲಿ ನೀರು ಸಿಗುವ ವ್ಯವಸ್ಥೆಯನ್ನು ಮಾಡಿಕೊಡಬೇಕು. ಆದರೆ ಈ ಅರಣ್ಯಾಧಿಕಾರಿಗಳಿಗೆ ರಸ್ತೆ ಬದಿ ಗಿಡ ನೆಡುವುದಕ್ಕೆ ಇನ್ನಿಲ್ಲದ ಉತ್ಸಾಹ. ಈ ವರ್ಷ ನೆಟ್ಟ ಗಿಡ ಮುಂದಿನ ವರ್ಷ ಸಾಯುತ್ತದೆ. ಹೀಗಾಗಿ ಕೆಲಸಕ್ಕೆ ನಿವೃತ್ತಿಯಾಗೋ ತನಕ ರಸ್ತೆ ಬದಿ ಗಿಡ ನೆಡುತ್ತಲೇ ಇರುತ್ತಾರೆ.
Discussion about this post