ಬೆಂಗಳೂರು : ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಪತ್ರಕರ್ತ ರಾಷ್ಟ್ರೀಯವಾದಿ ಅನ್ನುವ ಪದದ ಕುರಿತಂತೆ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿದೆ. ಅದಕ್ಕೆ ಕಾರಣ ಟಿವಿ5 ಕನ್ನಡ ವಾಹಿನಿಯಲ್ಲಿ ನಡೆದಿರುವ ಬೆಳವಣಿಗೆ.
ಸಾಲು ಸಾಲು ಸುದ್ದಿವಾಚಕರು ಸೇರಿದಂತೆ ಅನೇಕ ಪತ್ರಕರ್ತರು ವಾಹಿನಿಗೆ ರಾಜೀನಾಮೆ ಕೊಡುತ್ತಿರುವ ಕಾರಣ ಇದೀಗ ರಾಷ್ಟ್ರೀಯವಾದಿ ಪದ ಮುನ್ನಲೆಗೆ ಬಂದಿದೆ. ಇದಕ್ಕೆ ಮುನ್ನುಡಿ ಬರೆದಿದ್ದು ಶ್ರೀಲಕ್ಷ್ಮಿ ರಾಜ್ ಕುಮಾರ್ ಅವರು ಟಿವಿ5 ಬಿಟ್ಟ ಸುದ್ದಿ.
ಕಾರಣವಿಲ್ಲದೆ ಮೋದಿಯನ್ನು ಬೈಯಲು ಸಾಧ್ಯವಿಲ್ಲ ಎಂದು ಬಹಿರಂಗ ಹೇಳಿಕೆ ಕೊಟ್ಟರೋ, ರಾಷ್ಟ್ರೀಯವಾದಿ ಅನ್ನುವ ಪಟ್ಟ ಅವರಿಗೆ ಬಂದಿತ್ತು. ಯಾವಾಗ ಈ ಪದ ಪ್ರಯೋಗವಾಯ್ತೋ, ಮೋದಿ ವಿರೋಧಿಗಳು ಅದರಲ್ಲೂ ಪ್ರಗತಿಪರರು ಎಂದು ಕರೆಸಿಕೊಂಡವರು ಎದ್ದು ನಿಂತರು. ರಾಜೀನಾಮೆಯ ಅಸಲಿ ಕಾರಣವನ್ನು ಸೈಡಿಗಿಟ್ಟು ಚರ್ಚೆ ಶುರುವಿಟ್ಟುಕೊಂಡರು.
ಇದರ ಬೆನ್ನಲ್ಲೇ ಚಂದನ್ ಶರ್ಮ, ರಾಘವ್ ಸೂರ್ಯ ಕೂಡಾ ಟಿವಿ5 ವಾಹಿನಿಯಿಂದ ಹೊರಬಂದರು. ಅವರಿಗೂ ರಾಷ್ಟ್ರೀಯವಾದಿ ಪತ್ರಕರ್ತರು ಅನ್ನುವ ಕಿರೀಟ ಸಿಕ್ಕಿತು. ಇದಾದ ಬೆನ್ನಲ್ಲೇ ಚಂದನ್ ರಾಷ್ಟ್ರೀಯವಾದಿ ಅವರು ಮೋದಿ ಪರ, ಬಿಜೆಪಿ ಪರ ಅನ್ನುವ ಆರೋಪಗಳು ಕೇಳಿ ಬಂತು. ಮೋದಿಯನ್ನು ಟೀಕಿಸಲು ಮನಸ್ಸಿಲ್ಲದ ಕಾರಣದಿಂದ ಅವರು ಟಿವಿ5 ಬಿಟ್ಟರು ಅನ್ನುವ ಸುದ್ದಿಗಳು ಹರಿದಾಡಿತು.
ಈ ಎಲ್ಲಾ ಬೆಳವಣಿಗೆ ಕುರಿತಂತೆ ವೆಬ್ ಚಾನೆಲ್ ಒಂದರ ಜೊತೆಗೆ ಮಾತನಾಡಿರುವ ಚಂದನ್ ಶಬ್ಧ ರಾಷ್ಟ್ರೀಯವಾದಿ ಅನ್ನುವ ಪದದ ಕುರಿತಂತೆ ತನ್ನ ನಿಲುವೇನೂ ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

“ ರಾಷ್ಟ್ರೀಯವಾದ ಅನ್ನುವುದು ಅದೊಂದು ಅದ್ಭುತ ಪದ, ಪ್ರೀತಿ ಕೊಟ್ಟ, ಹೆಸರು ಕೊಟ್ಟ, ಜಾಗ ಮಾಡಿಕೊಟ್ಟ, ಉಸಿರು ಕೊಟ್ಟ ಈ ಜಾಗವನ್ನ ಈ ಪ್ರದೇಶವನ್ನ ಹಾಗೂ ಈ ಪ್ರದೇಶದಲ್ಲಿರುವ ಜನರನ್ನ ಯಾರು ಅತೀ ಹೆಚ್ಚಾಗಿ ಪ್ರೀತಿಸುತ್ತಾರೋ ಮತ್ತು ಬದ್ಧತೆಯಿಂದ ನಡೆದುಕೊಳ್ಳುತ್ತಾರೆ ಅವರು ರಾಷ್ಟ್ರೀಯವಾದಿಗಳು”
ನಾನು ಭಾರತಮಾತೆಯ ಪುತ್ರ, ನನ್ನ ತಾಯಿiz ಗಾಯವಾಯ್ತು ಅಂದ್ರೆ ನಾನು ಓಡಿ ಬರುತ್ತೇನೆ, ಆಕೆಗೆ ಸಾಂತ್ವಾನ ಹೇಳುತ್ತೇನೆ. ಪುತ್ರನಾಗಿ ಮಾಡಬೇಕಾದ ಕರ್ತವ್ಯ ಮಾಡುತ್ತೇನೆ. ಅದು ನನ್ನ ರಾಷ್ಟ್ರೀಯವಾದ ಅಂದಿರುವ ಚಂದನ್ ಶರ್ಮಾ ನನ್ನ ದೇಶ ತೊಂದರೆಯಲ್ಲಿರುವಾಗ ಪ್ರಶ್ನಿಸುವ ಜೊತೆ ಜೊತೆಗೆ ಪರಿಹಾರ ಕೂಡಾ ಕೊಡಬೇಕು. ಪ್ರಶ್ನಿಸುವಾಗಲೂ ಕೂಡಾ ನನ್ನ ಪರಿಧಿ ಏನಿದೆ ಅನ್ನುವುದನ್ನು ತಿಳಿದುಕೊಂಡು ಪ್ರಶ್ನಿಸಬೇಕು ಅಂದಿದ್ದಾರೆ.

ನರೇಂದ್ರ ಮೋದಿಯನ್ನು ಹೊಗಳಿದ್ರೆ, ಬಿಜೆಪಿಯನ್ನು ಹೊಗಳಿದ್ರೆ ರಾಷ್ಚ್ರೀಯವಾದಿ ಅನ್ನು ಹಣೆಪಟ್ಟಿ ಕಟ್ಟಲಾಗುತ್ತಿದೆಯೇ ಅನ್ನುವ ಪ್ರಶ್ನೆಗೆ ಉತ್ತರಿಸಿರುವ ಚಂದನ್, ನನಗೆ ದೇವೇಗೌಡರು ತುಂಬಾ ಇಷ್ಟ..ಹಾಗಂತ ನಾನು ತೆನೆ ಹೊತ್ತ ಪುರುಷನಲ್ಲ. ಮನಮೋಹನ್ ನನಗೆ ತುಂಬಾ ಇಷ್ಟ ಹಾಗಂತ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದವನಲ್ಲ. ಮೋದಿಯವರ ಹಲವರು ಕ್ರಾಂತಿಕಾರಿ ಹೆಜ್ಜೆಗಳು ನನಗೆ ತುಂಬಾ ಇಷ್ಟ, ಹಾಗಂತ ಅವರು ಮಾಡಿದ ಎಲ್ಲಾ ಕೆಲಸವೂ ಸರಿ ಅನ್ನೋದಿಲ್ಲ. ಕೆಲವೊಂದು ಲೋಪಗಳು ಅಲ್ಲೂ ನಡೆದಿದೆ.ನಾನು ಅದನ್ನು ಖಂಡಿತಾ ಪ್ರಶ್ನಿಸುತ್ತೇನೆ. ಸರಿ ಮಾಡಬೇಕು ಎಂದು ಆಗ್ರಹಿಸುತ್ತೇನೆ. ಅನ್ನುವ ಮೂಲಕ ನಾನೊಬ್ಬ ತಟಸ್ಥ ಪತ್ರಕರ್ತ ಎಂದು ಸ್ಪಷ್ಟಪಡಿಸಿದ್ದಾರೆ.
Discussion about this post