ಚಿತ್ರದುರ್ಗ : ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಕೈಗೊಂಡಿರುವ 5 ದಿನಗಳ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.
ನಿನ್ನೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ ಡಿಕೆ ಶಿವಕುಮಾರ್ ಇಂದು ಶಿರಾ ಹಾಗೂ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು. ಬೆಂಗಳೂರಿನಿಂದ ಬೆಳಗ್ಗೆ ಶಿರಾಗೆ ಪ್ರಯಾಣ ಬೆಳೆಸಿದ ಡಿಕೆಶಿ ಕಾರ್ಯಕರ್ತರ ಜೊತೆ ಸೇರಿ ಪ್ರತಿಭಟನೆ ನಡೆಸಿದರು.
ಇದಾದ ಬಳಿಕ ಹಿರಿಯೂರಿಗೆ ಭೇಟಿ ಕೊಟ್ಟ ಡಿಕೆಶಿ ಸುಧಾಕರ್ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರ ಜೊತೆ ಸೇರಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಸರ್ಕಾರ ಸಚಿವರ ಮೇಲೆ ವಾಗ್ದಾಳಿ ನಡೆಸಿದ ಡಿಕೆಶಿ, ಕೊರೋನಾ ಸೋಂಕಿತರ ಕಾಳಜಿ ಬಿಜೆಪಿ ಸಚಿವರಿಗಿಲ್ಲ ಎಂದು ಟೀಕಿಸಿದರು. ಜೊತೆಗೆ ಕೊರೋನಾ ಸೋಂಕಿತರ ಶವಗಳ ಅಂತ್ಯ ಸಂಸ್ಕಾರವನ್ನು ಮುಸ್ಲಿಂ ಬಾಂಧವರು ನೆರವೇರಿಸಿದ್ದಾರೆ. ಯುವ ಕಾಂಗ್ರೆಸ್ ಕೂಡಾ ಈ ಕೆಲಸವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಇದೇ ವೇಳೆ ಇಂಧನ ದರ ಏರಿಕೆ ಕುರಿತಂತೆ ಮಾತನಾಡಿದ ಡಿಕೆಶಿ, ತಕ್ಷಣ ಇಂಧನ ದರ ಇಳಿಕೆಯಾಗಲೇಬೇಕು. ಶ್ರೀಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುವುದು ನಿಲ್ಲಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರವನ್ನು ಜನ ಕಿತ್ತೊಗೆಯುವಂತಾಗಬೇಕು, ಇದಕ್ಕಾಗಿ ಕಾರ್ಯಕರ್ತರು ಸಿದ್ದರಾಗಬೇಕು ಎಂದು ಕರೆ ನೀಡಿದ ಡಿಕೆಶಿ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗಬೇಕು ಅಂದರು.
ಇದೇ ವೇಳೆ ನಾಳೆ ತಿಪಟೂರಿಗೆ ತೆರಳಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು.
Discussion about this post