” ಪ್ರಜ್ವಲ್ ” ಎಂಬ ಹೆಸರೇ ಯಕ್ಷರಂಗದಲ್ಲಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ ಹೆಸರು . ಹನುಮಗಿರಿ ಮೇಳದ ತರುಣ ಕಲಾವಿದರಾದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ , ಸಣ್ಣ ಪ್ರಾಯದಲ್ಲೇ ದೊಡ್ಡ ಹೆಸರು ಮಾಡಿದ ಅದ್ಭುತ ಕಲಾವಿದ .ಕೇವಲ 31 ವರ್ಷ ಪ್ರಾಯದ ಪ್ರಜ್ವಲ್ ಗಳಿಸಿದ ಹೆಸರು , ಪಡೆದ ವೇಗ , ಯಾರೂ ಊಹಿಸಲಾಗದ್ದು . ಗಜ ಮೇಳ ಎನಿಸಿದ ಹನುಮಗಿರಿ ಮೇಳದ ಕಲಾವಿದನಾಗಿ, ಕೆಲವೊಮ್ಮೆ ತಮಗೆ ದೊರಕಿದ ಅತಿ ಸಣ್ಣ ಪಾತ್ರವನ್ನೇ ಹಿಗ್ಗಿಸಿ , ತನ್ನ ಸೃಜನಶೀಲತೆಯ ಕಲ್ಪನೆಯೊಂದಿಗೆ ” ಮುಖ್ಯ ಪಾತ್ರ ” ವಾಗಿ ಚಿತ್ರಿಸಿದ ಹಿರಿಮೆ ಈ ಪ್ರಜ್ವಲರದು .ಉತ್ತಮ ನಾಟ್ಯ , ಸಾಹಿತ್ಯ ಭರಿತವಾದ ಚುರುಕಿನ ಸಂಭಾಷಣೆ , ಹಾಸ್ಯರಸವನ್ನು ಸಂಭಾಷಣೆಯಲ್ಲಿ ಜೋಡಿಸುವ ವಾಗ್ವೈಖರಿಯಿಂದ ಪ್ರಜ್ವಲರು ಕಲಾಭಿಮಾನಿಗಳ ಮನ ಸೂರೆಗೊಳಿಸಿದ ಅಸಾಮಾನ್ಯ ಕಲಾವಿದರು . ಬಂಟ್ವಾಳ ಜಯರಾಮ ಆಚಾರ್ಯ , ಕಟೀಲು ಸೀತಾರಾಮ ಕುಮಾರ್ ರಂಥಹ ಸುಪ್ರಸಿದ್ಧ ಹಾಸ್ಯ ಕಲಾವಿದರಿರುವ ಹನುಮಗಿರಿ ಮೇಳದಲ್ಲಿ , ಹಾಸ್ಯದಿಂದಲೇ ಪ್ರೇಕ್ಷಕರನ್ನು ಆಕರ್ಷಿಸುವುದೆಂದರೆ , ಅದು ಖಂಡಿತವಾಗಿಯೂ ಸುಲಭದ ಸಾಧನೆಯಲ್ಲ. ವಿಶೇಷವಾದ ಪ್ರತಿಭೆಯಿದ್ದಲ್ಲಿ ಮಾತ್ರ ಇದು ಸಾಧ್ಯ . ಈ ನಿಟ್ಟಿನಲ್ಲಿ ” ಉಜ್ವಲರಾಗಿ ಮೆರೆಯಲು ಪ್ರಜ್ವಲರದು ಕಠಿಣ ಸಾಧನೆಯೇ ಹೌದು . “
09.04 .1989ರಲ್ಲಿ ಗುರುವಾಯನಕೆರೆಯ ಬೇಬಿಶೆಟ್ಟಿ – ಸಂಪಾವತಿ ಶೆಡ್ತಿ ದಂಪತಿಗಳ ಸುಪುತ್ರರಾಗಿ ಜನಿಸಿದ ಪ್ರಜ್ವಲರು ಯಕ್ಷಗಾನ ಕಲಾವಿದನಾಗಿ ಪ್ರವೇಶಿಸಿದ್ದೇ ಆಕಸ್ಮಿಕವಾಗಿ.

ಬಾಲ್ಯದಲ್ಲಿ ಚುರುಕಿನ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದ ಪುಟ್ಟ ಬಾಲಕ ಪ್ರಜ್ವಲ್ ತಾನು ಸ್ನಾತಕೋತ್ತರ ಪದವಿ ಗಳಿಸಿ ಉನ್ನತ ಅಧಿಕಾರಿಯಾಗಬೇಕೆಂಬ ಕನಸು ಕಂಡವರು.ಆದರೆ , ಗುರುವಾಯನಕೆರೆಯ ಸುತ್ತಮುತ್ತ ಜರಗುತ್ತಿದ್ದ ಯಕ್ಷಗಾನ ಪ್ರದರ್ಶನ ನೋಡಿ ನೋಡಿ ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆ ಮೂಡಿತು . ಯಕ್ಷಗಾನದ ಯಾವುದೇ ಹಿನ್ನೆಲೆ ಇಲ್ಲದ ಕುಟುಂಬದಲ್ಲಿ ಜನಿಸಿದರೂ ತನ್ನ 5 ನೇ ತರಗತಿ ಪೂರೈಸಿದ ಕೂಡಲೇ ಧರ್ಮಸ್ಥಳ ಯಕ್ಷಗಾನ ಕೇಂದ್ರ ಸೇರಿದರು . ಆಗ ಕೇಂದ್ರದಲ್ಲಿ ಗುರುಗಳಾದ ಸುಪ್ರಸಿದ್ಧ ಕಲಾವಿದರಾದ ವರ್ಕಾಡಿ ತಾರಾನಾಥ ಬಲ್ಯಾಯರಲ್ಲಿ ಶಿಷ್ಯತ್ವ ಸ್ವೀಕರಿಸಿ , ಯಕ್ಷಗಾನದ ಪ್ರಾಥಮಿಕ ಹೆಜ್ಜೆ ಕಲಿತರು. ನಂತರ ದಿವಾಣ ಶಿವಶಂಕರ ಭಟ್ ಹಾಗೂ ಗೋವಿಂದ ಭಟ್ಟರಲ್ಲಿ ಹೆಚ್ಚಿನ ಅಭ್ಯಾಸ ಗಳಿಸಿ , ಧರ್ಮಸ್ಥಳ ಮೇಳ ಸೇರಿದರು.ಆಗ ಪ್ರಜ್ವಲರಿಗೆ ಕೇವಲ 12 ವರ್ಷ ಪ್ರಾಯ .ನಂತರ ಕಟೀಲು ಮೂರನೇ ಮೇಳ ಸೇರಿದರು .ಆಗ , ಮೂರನೇ ಮೇಳದ ಭಾಗವತರಾಗಿದ್ದವರು ಕುರಿಯ ಗಣಪತಿ ಶಾಸ್ತ್ರಿಯವರು . ” ರಂಗನಾಯಕ ” ಎನಿಸಿದ ಕುರಿಯರ ಕೈಯಲ್ಲಿ ಯಕ್ಷರಂಗದ ನಡೆಯನ್ನು ಪೂರ್ಣ ತಿಳಿದುಕೊಂಡರು . ನಂತರ ಕುಂಟಾರು ಮೇಳ ಸೇರಿದರು .ಕುಂಟಾರು ಮೇಳದಲ್ಲಿ ಹೆಚ್ಚಾಗಿ ತುಳು ಪ್ರಸಂಗಗಳೇ ಪ್ರದರ್ಶನವಾಗುವ ಕಾರಣ , ಹಾಸ್ಯದತ್ತ ಒಲವು ಮೂಡಿತು .ಎರಡು ವರ್ಷ ಕುಂಟಾರು ಮೇಳದ ತಿರುಗಾಟ ನಡೆಸಿ , ಎಡನೀರು ಸ್ವಾಮೀಜಿಯವರ ಎಡನೀರು ಮೇಳದಲ್ಲಿ ಎರಡು ವರ್ಷಗಳ ತಿರುಗಾಟ ನಡೆಸಿ ,ನಂತರ ಹೊಸನಗರ ಮೇಳ ಸೇರಿದರು . 9 ವರ್ಷ ಹೊಸನಗರ ಮೇಳದಲ್ಲಿ ಕಲಾಸೇವೆ ಮಾಡಿ , ನಂತರ ಹೊಸನಗರ ಮೇಳವು ಎಡನೀರು -2 ನೇ ಮೇಳವಾಗಿ ಪರಿವರ್ತನೆ ಹೊಂದಿದಾಗ ಎಡನೀರು ಮೇಳದಲ್ಲಿ ಎರಡು ವರ್ಷ ಹಾಗೂ ಪ್ರಸ್ತುತ ಅದೇ ಮೇಳವು ಹನುಮಗಿರಿ ಮೇಳವಾಗಿ ಪರಿವರ್ತನೆಗೊಂಡು ಅದೇ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

ಪ್ರಜ್ವಲ್ ಒಬ್ಬ ಅದ್ಭುತ , ಸೃಜನಶೀಲ ಕಲಾವಿದ . ಯಾವುದೇ ಪಾತ್ರಗಳನ್ನಾದರೂ ಸಮರ್ಥವಾಗಿ ನಿರ್ವಹಿಸಬಲ್ಲ ಕಲಾಕಾರ ರಾಜವೇಷ , ಸ್ತ್ರೀಪಾತ್ರ , ಬಣ್ಣದ ವೇಷ , ಹಾಸ್ಯಪಾತ್ರ – ಹೀಗೆ ಯಕ್ಷಗಾನದ ಎಲ್ಲಾ ವೇಷಗಳನ್ನು ನಿರ್ವಹಿಸಬಲ್ಲ ” ಮುಮ್ಮೇಳದ ಸವ್ಯಸಾಚಿ ” . ಆದರೂ , ಪ್ರಜ್ವಲರ ಪಾತ್ರಗಳಲ್ಲಿ ಹಾಸ್ಯರಸವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ .ಪ್ರೇಕ್ಷಕರೂ ಪ್ರಜ್ವಲರಿಂದ ಇದನ್ನೇ ಬಯಸುತ್ತಿದ್ದಾರೆ . ಯಾವುದೇ ಪಾತ್ರಗಳೇ ದೊರಕಲಿ, ಆ ಪಾತ್ರಗಳನ್ನು ಚೆನ್ನಾಗಿ ಚಿತ್ರಿಸುತ್ತಾರೆ . ಹನುಮಗಿರಿ ಮೇಳವು ಸುಪ್ರಸಿದ್ಧ ಕಲಾವಿದರ ಗಡಣವೇ ಆದ ಕಾರಣ , ಕೆಲವೊಂದು ಪ್ರಸಂಗಗಳಲ್ಲಿ ಪ್ರಜ್ವಲರಿಗೆ ಸಣ್ಣ ಪಾತ್ರಗಳೇ ದೊರಕುವುದು .
ಆದರೂ , ಆ ಸಣ್ಣ ಪಾತ್ರಗಳೇ ಪ್ರೇಕ್ಷಕರ ಮನಸ್ಸಲ್ಲಿ ಮೂಡುವಂತೆ ಪ್ರಜ್ವಲರು ನಿರ್ವಹಿಸುತ್ತಾರೆ .ತಾನು ನಿರ್ವಹಿಸುತ್ತಿದ್ದ ಪಾತ್ರಗಳು ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವಂಥಹ ಚಿತ್ರಣ ನೀಡುವುದು ಪ್ರಜ್ವಲರ ವಿಶೇಷತೆ .

ಪ್ರಜ್ವಲ್ ಪ್ರತ್ಯುತ್ಪನ್ನಮತಿಯುಳ್ಳ ಕಲಾವಿದ .ಹಾಸ್ಯ ಹಾಗೂ ವಿತಂಡವಾದ ಮಾಡಲು ಅವಕಾಶ ಇರುವ ಪಾತ್ರಗಳು ಪ್ರಜ್ವಲರಿಗೆ ದೊರಕಿದಲ್ಲಿ , ಅಂದು ಪ್ರೇಕ್ಷಕರಿಗೆ ರಸದೌತಣ .ಪ್ರಜ್ವಲರ ಕೌರವ , ರಾವಣ , ಸುಗ್ರೀವ , ವಿದ್ಯುನ್ಮಾಲಿ, ದುಃಶಾಸನ , ಆಕಾಶರಾಯ , ಬೃಹನ್ನಳೆ , ದಿತಿದೇವಿಯ ದೂತ , ಜಾಂಬವ , ಮುಂತಾದ ಪಾತ್ರಗಳು ಪ್ರೇಕ್ಷಕರಿಗೆ ರಂಜನೆ ಒದಗಿಸುತ್ತಿವೆ ಮಾತ್ರವಲ್ಲದೇ ಅಪಾರ ಪ್ರಸಿದ್ಧಿಯನ್ನೂ ತಂದ ಪಾತ್ರಗಳು. ಪ್ರಜ್ವಲ್ ಕುಮಾರ್ ಯಾವುದೇ ಪಾತ್ರಗಳನ್ನು ಮಾಡಬಲ್ಲವರಾದರೂ ಅವರಿಗೆ ಹೆಸರು ತಂದುಕೊಟ್ಟದ್ದು ಹಾಸ್ಯಮಿಶ್ರಿತ ಪಾತ್ರಗಳು .ಅದರಲ್ಲೂ ಕೌರವ , ಸಾಲ್ವ , ಭೀಮ , ಅರ್ಜುನ ಮುಂತಾದ ಪಾತ್ರಗಳ ನಿರ್ವಹಣೆಯಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾದ ದಿ.ಎಂಪೆಕಟ್ಟೆ ರಾಮಯ್ಯ ರೈಯವರ ಛಾಯೆ ಕಾಣುತ್ತಿರುವುದು ಉಲ್ಲೇಖನೀಯ . ” ಪ್ರಜ್ವಲರು ಇನ್ನಷ್ಟು ಸಾಧಿಸಲು ಯಶಸ್ವಿಯಾದರೆ ದಿ. ಎಂಪೆಕಟ್ಟೆ ರಾಮಯ್ಯ ರೈ ಎಂಬ ವಿಶಿಷ್ಟ ಯಕ್ಷಗಾನ ಕಲಾವಿದರ ಸಮರ್ಥ ಉತ್ತರಾಧಿಕಾರಿಯಾಗುವ ಸಾಧ್ಯತೆ ಅಲ್ಲಗಳೆಯಲಾಗದು .” ( ಪ್ರಜ್ವಲರು ಎಂಪೆಕಟ್ಟೆಯವರ ಪಾತ್ರ ನೋಡಿರಲಿಕ್ಕಿಲ್ಲ ) ಭಕ್ತಪ್ರಹ್ಲಾದ , ಮಾನಿಷಾದ , ಮಹಾಬ್ರಾಹ್ಮಣ ಪ್ರಸಂಗಗಳಲ್ಲಿ ಬರುವ ಶಿಷ್ಯನ ಪಾತ್ರವಂತೂ ಪ್ರಜ್ವಲರ ಪ್ರತಿಭೆಯನ್ನು ಒರೆಗಲ್ಲಿಗೆ ಹಚ್ಚಿದ ಪಾತ್ರ . ತಮ್ಮದೇ ಕಲ್ಪನೆಯ ” ಹೆಡ್ಡನಾದರೂ ಬುದ್ಧಿವಂತ ” ಶಿಷ್ಯನ ಪಾತ್ರ ಯಾವತ್ತೂ ಮರೆಯಲಾಗದಂತಹುದು . ಬೇಟೆಗಾರರ ಪಡೆ , ರಾಕ್ಷಸ ದೂತ , ಅನುಕೂಲ ಸ್ತ್ರೀ , ಗೌಡ ಮುಂತಾದ ಪಾತ್ರಗಳಲ್ಲಿ ಉತ್ತಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವುದು ಪ್ರಜ್ವಲರ ಪ್ರತ್ಯುತ್ಪನ್ನಮತಿಗೆ ಉತ್ತಮ ನಿದರ್ಶನಗಳು .
” ಶ್ರೀನಿವಾಸ ಕಲ್ಯಾಣ ” ದಲ್ಲಿಯ ಆಕಾಶರಾಯ ಪಾತ್ರಕ್ಕೆ ಹಾಸ್ಯದ ಲೇಪನದೊಂದಿಗೆ ವಿಶಿಷ್ಠವಾದ ಚಿತ್ರಣ ನೀಡಿ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡುತ್ತಾರೆ .( ಯತಾರ್ಥಕ್ಕಾದರೆ ಆಕಾಶರಾಯ ಪೋಷಕಪಾತ್ರ . ಸುರತ್ಕಲ್ ಮೇಳದಲ್ಲಿ ತೆಕ್ಕಟ್ಟೆ ಆನಂದ ಮಾಸ್ತರರು ಗಾಂಭೀರ್ಯದಿಂದ ನಿರ್ವಹಿಸಿ ಈ ಪಾತ್ರಕ್ಕೆ ಘನತೆ ತಂದುಕೊಟ್ಟಿದ್ದರು .ಆದರೆ ತೆಕ್ಕಟ್ಟೆಯವರು ಈ ಪಾತ್ರ ಮಾಡುವ ಸಮಯದಲ್ಲಿ ಪ್ರಜ್ವಲರು ಯಕ್ಷರಂಗವನ್ನೇ ಪ್ರವೇಶಿಸಿರಲಿಲ್ಲದ ಕಾರಣ , ತೆಕ್ಕಟ್ಟೆಯವರ ಪಾತ್ರ ನೋಡಿರುವ ಸಂಭವವೇ ಇಲ್ಲ .ಆದ ಕಾರಣ ಪ್ರಜ್ವಲರು ಆಕಾಶರಾಯ ಪಾತ್ರಕ್ಕೆ ಹಾಸ್ಯಮಿಶ್ರಿತವಾಗಿ ತಮ್ಮದೇ ಆದ ಚಿತ್ರಣ ನೀಡಿದ್ದಾರೆ .) ಹನುಮಗಿರಿ ಮೇಳದ ಕಲಾವಿದರು ಪ್ರಜ್ವಲರ ಆಕಾಶರಾಯನ ಪಾತ್ರ ಎಷ್ಟೋ ಭಾರಿ ನೋಡಿರಬಹುದು .ಆದರೂ , ಇಂದಿಗೂ ಪ್ರಜ್ವಲರ ಆಕಾಶರಾಯ ಪಾತ್ರ ರಂಗಸ್ಥಳಕ್ಕೆ ಹೋದಾಗ ಮೇಳದ ಕಲಾವಿದರು ವೇದಿಕೆಯ ಹಿಂದಿನಿಂದ ಪ್ರಜ್ವಲರ ಪಾತ್ರ ತಪ್ಪದೇ ನೋಡುತ್ತಾರೆ . ಮೇಳದ ಇತರ ಕಲಾವಿದರೂ ಪ್ರಜ್ವಲರ ಯಾವುದೇ ಪಾತ್ರ ತಮ್ಮ ಎದುರಾಗಿ ಬಂದಾಗ , ಪ್ರಜ್ವಲರನ್ನು ಇನ್ನಷ್ಟು ಕೆಣಕಿ , ಹಾಸ್ಯಕ್ಕೆ ಪ್ರೋತ್ಸಾಹಿಸುತ್ತಾರೆ .ದಿ.ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರು ಪ್ರಜ್ವಲರ ಪಾತ್ರಗಳೊಂದಿಗೆ ಹಾಸ್ಯಮಯವಾಗಿಯೇ ಸಂಭಾಷಿಸುತ್ತಿದ್ದರು. ಶಿವರಾಮ ಜೋಗಿ , ಶೀನಪ್ಪ ರೈ , ವಾಸುದೇವ ರಂಗಾಭಟ್ , ಪೆರ್ಮುದೆ , ಹೊಳ್ಳ , ಬಂಟ್ವಾಳ , ಸೀತರಾಮ ಕುಮಾರ್ , ಶೆಟ್ಟಿಗಾರ್ , ಜಗದಾಭಿ , ಜಯಾನಂದ , ದಿವಾಕರ ರೈ , ವೇಣೂರು , ಪೆರ್ಲ , ಹಿಲಿಯಾಣ ,ರಕ್ಷಿತ್ ಮುಂತಾದ ಎಲ್ಲಾ ಕಲಾವಿದರೂ ಪ್ರಜ್ವಲರ ಪಾತ್ರಗಳು ಎದುರಾಗಿ ಬಂದಾಗ ಚೆನ್ನಾಗಿ ಸಂಭಾಷಿಸಿ ಪ್ರಸಂಗವು ಹಾಸ್ಯದ ರಸೋತ್ಕರ್ಷಕ್ಕೆ ತಲುಪಲು ಪೂರಕವಾಗಿದ್ದಾರೆ . ಹಿಮ್ಮೇಳದವರೂ ಪ್ರಜ್ವಲರ ಹಾಸ್ಯರಸಕ್ಕೆ ಸ್ಪಂದಿಸಿ ಪ್ರೋತ್ಸಾಹಿಸುತ್ತಿರುವುದು ಗಮನಾರ್ಹ . ನಾಲ್ಕು ವರ್ಷಗಳ ಹಿಂದೆ ದಿ.ಚೆನ್ನಪ್ಪ ಶೆಟ್ಟರ ಸಂಸ್ಮರಣೆಯ ಯಕ್ಷಗಾನ ಪ್ರದರ್ಶನದಲ್ಲಿ ಪೆರ್ಮುದೆಯವರ ಕರ್ಣನ ಎದುರು ಅತೀಸಣ್ಣ ಪಾತ್ರವಾದ ” ಸರ್ಪಾಸ್ತ್ರ ” ನಿರ್ವಹಿಸಿ , ಸುಮಾರು ಅರ್ಧ ಘಂಟೆಗಳ ಕಾಲ ಪೆರ್ಮುದೆಯವರೊಂದಿಗೆ ಸಂಭಾಷಿಸಿ ಪ್ರೇಕ್ಷಕರನ್ನು ರಂಜಿಸಿ , ಗುರುಗಳ ಸಂಸ್ಮರಣೆಗಾಗಿ ( ಚೆನ್ನಪ್ಪ ಶೆಟ್ಟರು ) ಇಷ್ಟೆಲ್ಲಾ ಮಾತಾಡಿದ್ಧೆ ಎಂದು ಹೇಳಿ ಪ್ರೇಕ್ಷಕರ ಕರತಾಡನದ ಮೆಚ್ಚುಗೆ ಪಡೆದಿದ್ದರು . ಶಲ್ಯನಾಗಿ ರಂಗಾಭಟ್ಟರೂ ಚೆನ್ನಾಗಿ ಸ್ಪಂದಿಸಿದ್ದರು .ಉತ್ತಮ ಮಾತುಗಾರರೂ ಆಗಿರುವ ಪ್ರಜ್ವಲರು ಶುಂಭ , ವಿದ್ಯುನ್ಮಾಲಿ ಮುಂತಾದ ಗಂಭೀರ ಪಾತ್ರಗಳಲ್ಲಿ ಹಾಸ್ಯ ಬಾರದಂತೆ ವೀರರಸವನ್ನೂ ಅಷ್ಟೇ ಚೆನ್ನಾಗಿ ನಿರ್ವಹಿಸುತ್ತಾರೆ . ಇವರ ಚಕ್ರವ್ಯೂಹದ ದುಃಶಾಸನ ಪಾತ್ರ ಅತ್ಯಂತ ಜನಪ್ರಿಯ .ಇದಕ್ಕೆ ಕಾರಣ , ” ದ್ರೌಪದಿ ವಸ್ತ್ರಾಪಹಾರ ” ಪ್ರಸಂಗದ ದುಃಶಾಸನ ಪಾತ್ರದಲ್ಲಿ ಸುಪ್ರಸಿದ್ಧರಾಗಿರುವ ಅರುವ ಕೊರಗಪ್ಪ ಶೆಟ್ಟರ ಅನುಕರಣೆ ಮಾಡಿ ಅರುವದವರ ನೆನಪು ಬರುವಂತೆ ಮಾಡುತ್ತಿರುವುದು .ಒಮ್ಮೆ ಮಂಗಳೂರು ಪುರಭವನದಲ್ಲಿ ಅರುವದವರ ಪಾತ್ರಕ್ಕೆ ಎದುರಾಗಿ , ಅರುವದವರದ್ದೇ ಅನುಕರಣೆ ಮಾಡಿದಾಗ ಅರುವದವರೇ ಮೆಚ್ಚಿದ್ದರು . ಇತ್ತೀಚೆಗೆ ತಾಳಮದ್ದಳೆ ಕೂಟಗಳಲ್ಲೂ ಕಾಣಿಸಿಕೊಳ್ಳುತ್ತಿರುವ ಪ್ರಜ್ವಲ್ ಈ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ .
ಎಂ.ಶಾಂತರಾಮ ಕುಡ್ವ ಮೂಡಬಿದಿರೆ
Discussion about this post