ರಾಜ್ಯದಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಕೊನೆಯ ಹೋರಾಟ ಎಂದು ಭಾವಿಸಿದಂತಿದೆ. ಅಲ್ಲೂ ಜನ ಅಧಿಕಾರ ಕೊಡದೇ ಹೋದರೆ ಅವರು ಸಕ್ರಿಯ ರಾಜಕಾರಣದಿಂದ ಹಿಂದಕ್ಕೆ ಸರಿಯುವ ಸಾಧ್ಯತೆಗಳಿದೆ.
ಹೀಗಾಗಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ಕಸರತ್ತು ಪ್ರಾರಂಭಿಸಿರುವ ಅವರು ಚುನಾವಣಾ ತಂತ್ರಗಾರಿಕಾ ನಿಪುಣ ಪ್ರಶಾಂತ್ ಕಿಶೋರ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಒಂದು ಸುತ್ತಿನ ಮಾತುಕತೆಗಳು ಈಗಾಗಲೇ ಮುಕ್ತಾಯವಾಗಿದೆ.
ಹಾಗಾದ್ರೆ ಪ್ರಶಾಂತ್ ಕಿಶೋರ್ ಸೋಲಿನ ದಂಡೆಯಲ್ಲಿ ನಿಂತಿರುವ ಜೆಡಿಎಸ್ ಗೆ ಹೊಸ ಶಕ್ತಿ ತುಂಬುತ್ತಾರೆಯೇ.ಪ್ರಸ್ತುತ ಜೆಡಿಎಸ್ ಪರಿಸ್ಥಿತಿ ನೋಡಿದರೆ ಪ್ರಶಾಂತ್ ಕಿಶೋರ್ ರಂತಹ 100 ಜನ ಬಂದರೂ ಜೆಡಿಎಸ್ ಅನ್ನು ಮತ್ತೆ ಕಟ್ಟುವುದು ಕಷ್ಟ.
ಈಗಾಗಲೇ ಜನ ಮೆಚ್ಚಿದ ಅನೇಕ ನಾಯಕರು ಜೆಡಿಎಸ್ ತೊರೆದಿದ್ದಾರೆ. ಕುಟುಂಬ ರಾಜಕಾರಣದ ಕಳಂಕ ಈಗಾಗಲೇ ಪಕ್ಷಕ್ಕೆ ಅಂಟಿಕೊಂಡಿದೆ. ದೇವೇಗೌಡರಿಂದ ಹಿಡಿದು ಪ್ರಜ್ವಲ್ ರೇವಣ್ಣ ತನಕ ಹತ್ತಿರ ಹತ್ತಿರ 10 ಮಂದಿ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಹೀಗಾಗಿ ಪ್ರತಿಪಕ್ಷಗಳಿಗೆ ಇದೊಂದು ದೊಡ್ಡ ಅಸ್ತ್ರವಾಗಿದೆ.
ಇನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಜೆಡಿಎಸ್ ಅಧಿಕಾರಕ್ಕಾಗಿ ಕೈ ಜೋಡಿಸಿದೆ. ಆದರೆ ಎರಡೂ ಪಕ್ಷಗಳ ಜೊತೆ ಅದು ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿಲ್ಲ. ಹೀಗಾಗಿ ಜನ ಪಕ್ಷವನ್ನು ನಂಬಲು ಸಿದ್ದರಿಲ್ಲ.
ಇನ್ನು ಜೆಡಿಎಸ್ ಭದ್ರಕೋಟೆ ಎಂದು ಕರೆಯಲ್ಪಟ್ಟ ಕ್ಷೇತ್ರಗಳಲ್ಲಿ ನಾಯಕರು ಹಾಗೂ ಕಾರ್ಯಕರ್ತರಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.
ಜೆಡಿಎಸ್ ಮತ್ತೆ ಎದ್ದು ಬರಬೇಕಾದರೆ ತಳಮಟ್ಟದಿಂದ ಅದನ್ನು ಕಟ್ಟಬೇಕಾಗಿದೆ. ಪಕ್ಷದಲ್ಲಿ ಕುಮಾರಸ್ವಾಮಿಯೊಬ್ಬರೇ ನಾಯಕರಾಗಿದ್ದಾರೆ. ಅವರೊಬ್ಬರೇ ಇಡೀ ರಾಜ್ಯವನ್ನು ಸುತ್ತಿ ಪಕ್ಷ ಕಟ್ಟುವುದು ಅಸಾಧ್ಯವಾದ ಮಾತು.ಇನ್ನುಳಿದಂತೆ ಪಕ್ಷ ಕಟ್ಟಬಹುದಾದ ನಾಯಕರು ಅಥವಾ ಮಾಸ್ ಲೀಡರ್ ಎಂದು ಕರೆಸಿಕೊಳ್ಳುವ ಮುಖಗಳು ಪಕ್ಷದಲ್ಲಿ ಇಲ್ಲ. ಈಗಿರುವ ಬಹುತೇಕ ನಾಯಕರು ಪಕ್ಷಕ್ಕೆ ಬ್ಯಾಕ್ ಡೋರ್ ಎಂಟ್ರಿಕೊಟ್ಟವರೇ ಹೆಚ್ಚು. ಹೀಗಾಗಿ ಜನರಿಗೆ ಅವರ ಮೇಲೆ ನಂಬಿಕೆಗಳಿಲ್ಲ.
ಮಧು ಬಂಗಾರಪ್ಪರಂತಹ ನಾಯಕರು ಗಾಗಲೇ ಪಕ್ಷದಲ್ಲಿ ಸೈಡ್ ಲೈನ್ ಆಗಿದ್ದಾರೆ. ಪಕ್ಷದ ಇಮೇಜ್ ಅನ್ನು ಸುದ್ದಿ ವಾಹಿನಿಯ ಪ್ಯಾನಲ್ ಗಳಲ್ಲಿ ಎತ್ತಿ ಹಿಡಿದವರಿಗೆ ಪಕ್ಷದಲ್ಲಿ ರಾಜಕೀಯ ಅವಕಾಶಗಳು ಸಿಕ್ಕಿಲ್ಲ. ಹೀಗಾಗಿ ಪಕ್ಷದ ಇಮೇಜ್ ಅನ್ನು ಮಾಧ್ಯಮಗಳಲ್ಲಿ ಬಿಂಬಿಸುವ ಮಂದಿಯ ಕೊರತೆಯೂ ಪಕ್ಷಕ್ಕೆ ಕಾಡುತ್ತಿದೆ.
ಜಗನ್ಮೋಹನ್ ರೆಡ್ಡಿ, ಕೇಜ್ರಿವಾಲ್ ಪಕ್ಷಕ್ಕೆ ರಾಜಕೀಯ ಇತಿಹಾಸ ಕಡಿಮೆ. ಆದರೆ ಇದು ಜೆಡಿಎಸ್ಗೆ ದೊಡ್ಡ ರಾಜಕೀಯ ಇತಿಹಾಸವಿದೆ. ಆದರೂ ಜನರಿಗೆ ಕುಮಾರಣ್ಣ ಅಂದ್ರೆ ಇಷ್ಟ, ಜೆಡಿಎಸ್ ಅಂದ್ರೆ ಇಷ್ಟವಿಲ್ಲ.
ಇನ್ನು ಸಿದ್ದರಾಮಯ್ಯ, ಯಡಿಯೂರಪ್ಪ ಜನಪ್ರಿಯ ಯೋಜನೆಗಳು ಘೋಷಿಸಿ ಈಗಾಗಲೇ ಒಂದು ಮುದ್ರೆ ಒತ್ತಿದ್ದಾರೆ. ಕುಮಾರಸ್ವಾಮಿ ಒಳ್ಳೆಯ ಯೋಜನೆಗಳನ್ನು ಘೋಷಿಸಿದರು, ಆದರ ಲಾಭವನ್ನೂ ಜನ ಪಡೆದರು, ಆದರೆ ಅದು ಕುಮಾರಸ್ವಾಮಿಯ ಯೋಜನೆ ಅನ್ನುವ ಹೆಸರು ಉಳಿಯಲಿಲ್ಲ. ಇವತ್ತು ಅನ್ನ ಭಾಗ್ಯ ಅಂದ್ರೆ ಸಿದ್ದರಾಮಯ್ಯ ಅನ್ನುವಂತಹ ಯೋಜನೆಗಳು ಕುಮಾರಸ್ವಾಮಿ ಬತ್ತಳಿಕೆಯಲ್ಲಿ ಇಲ್ಲ
ಇನ್ನು ದೇಶದ ಇತರ ಕಡೆಯ ಪ್ರಾದೇಶಿಕ ಪಕ್ಷಗಳನ್ನು ಗಮನಿಸಿದರೆ ಅವುಗಳಿಗೆಲ್ಲಾ ಗಟ್ಟಿಯಾದ ನಿಲುವುಗಳಿದೆ. ಆದರೆ ಜೆಡಿಎಸ್ ಗೆ ಸ್ಪಷ್ಟವಾದ ರಾಜಕೀಯ ಅಜೆಂಡಾವೇ ಇಲ್ಲ.
ಜೆಡಿಎಸ್ ಈವರೆಗೂ ಮಾಡಿರುವುದು ಅನುಕೂಲ ಸಿಂಧು ರಾಜಕಾರಣ ಅನ್ನುವ ಭಾವನೆ ಜನರಲ್ಲಿದೆ. ಜೊತೆಗೆ ಜೆಡಿಎಸ್ ಅನ್ನು ಹಿಂದೂ ವಿರೋಧಿ ಎಂದು ಬಿಂಬಿಸುವಲ್ಲಿಯೂ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.
ಹಾಗಾದ್ರೆ ಜೆಡಿಎಸ್ ನಲ್ಲಿರುವುದು ಎಲ್ಲವೂ ನೆಗೆಟಿವ್ ಅಂಶಗಳೇ… ಖಂಡಿತಾ ಅಲ್ಲ ಪಾಸಿಟಿವ್ ಅನ್ನಿಸುವ ಅಂಶಗಳು ಪಕ್ಷದಲ್ಲಿದೆ. ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ರೌಡಿಗಳ ಹೆಡೆ ಮುರಿ ಕಟ್ಟಲಾಗಿತ್ತು.ಸಾಲಮನ್ನಾದಂತಹ ಯೋಜನೆಗಳನ್ನು ಪ್ರಕಟಿಸಲಾಗಿತ್ತು. ಕಷ್ಟ ಎಂದು ಬಂದವರ ಕಣ್ಣೀರು ಒರೆಸುವಲ್ಲಿ ಕುಮಾರಸ್ವಾಮಿಯವರದ್ದು ಎತ್ತಿದ ಕೈಯಾಗಿತ್ತು. ಆದರೆ ಅವೆಲ್ಲವನ್ನೂ ಜನರಿಗೆ ತಲುಪಿಸುವಲ್ಲಿ ಸೋತಿರುವುದೇ ಈ ಪರಿಸ್ಥಿತಿಗೆ ಕಾರಣ.
ಈ ಕಾರಣದಿಂದ ಪ್ರಶಾಂತ್ ಕಿಶೋರ್ ಬಂದರೂ ಕೂಡಾ ಬಹುಮತ ಪಡೆಯುವುದು ಜೆಡಿಎಸ್ ಗೆ ಕಷ್ಟವಾಗಲಿದೆ.
ಅಧಿಕಾರ ಹಿಡಿಯಲೇಬೇಕು ಅನ್ನುವುದಾಗಿದ್ದರೆ, ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನದ ಪಡೆದ ಕ್ಷೇತ್ರಗಳತ್ತ ತುರ್ತಾಗಿ ಗಮನ ಹರಿಸಬೇಕು. ಅಲ್ಲಿನ ಶಾಸಕರ ವೈಫಲ್ಯಗಳನ್ನು ಜನರಿಗೆ ತಲುಪಿಸಬೇಕು.
ಯುವಕರನ್ನು ಪಕ್ಷಕ್ಕೆ ಸೆಳೆಯುವ ಸಲುವಾಗಿ ಯುವ ನಾಯಕತ್ವಕ್ಕೆ ಪಕ್ಷದಲ್ಲಿ ಅವಕಾಶ ಕೊಡಬೇಕು.( ಕುಟುಂಬ ಸದಸ್ಯರನ್ನು ಹೊರತುಪಡಿಸಿ) ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಜನರಿಗೆ ಮನಮುಟ್ಟುವಂತೆ ಭಾಷಣ ಮಾಡಬಲ್ಲ ನಾಯಕರನ್ನು ರೆಡಿ ಮಾಡಬೇಕು.
ಈಗ ಸಾಮಾಜಿಕ ಜಾಲತಾಣಗಳು ಸಿಕ್ಕಾಪಟ್ಟೆ ಸಕ್ರಿಯ. ಈ ಕಾರಣದಿಂದ ಸೋಷಿಯಲ್ ಮೀಡಿಯಾ ಟೀಂ ಒಂದನ್ನು ಕಟ್ಟಿ, ಜೆಡಿಎಸ್ ಗೆ ಅಧಿಕಾರ ಯಾಕೆ ಕೊಡಬೇಕು ಅನ್ನುವುದನ್ನು ಜನರಿಗೆ ತಲುಪಿಸಬೇಕು. ಆಗ ಮಾತ್ರ ಕರ್ನಾಟಕದಲ್ಲಿ ಜೆಡಿಎಸ್ ಮತ್ತೆ ಎದ್ದು ನಿಲ್ಲಬಹುದು.
ಕೊನೆಯದಾಗಿ ದಳಪತಿಗಳು ಹೋದ ಕಡೆ ಭಾವನಾತ್ಮಕವಾಗಿ ಕಣ್ಣೀರು ಹಾಕಿ ಬರುತ್ತಾರೆ. ಮಾಧ್ಯಮಗಳಲ್ಲಿ ಅದು ಪ್ರತೀ ಸಲ ನೆಗೆಟಿವ್ ಆಗಿಯೇ ಸುದ್ದಿ ಪ್ರಸಾರವಾಗುತ್ತದೆ. ಈ ಕಣ್ಣೀರಿಗೆ ಪಾಸಿಟಿವ್ ಟಚ್ ಕೊಡುವ ತಾಕತ್ತನ್ನು ಪ್ರಶಾಂತ್ ಕಿಶೋರ್ ತೋರಿಸಬೇಕಾಗಿದೆ.
Discussion about this post