ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಸಂಭ್ರಮಕ್ಕೆ ತೆರೆ ಬೀಳಲು ಇನ್ನು ಕೆಲವೇ ದಿನಗಳು ಬಾಕಿ. ಕೊರೋನಾ ಆತಂಕದ ನಡುವೆಯೇ ಯಶಸ್ವಿಯಾಗಿ ಜಾತ್ರೆ ಮುಗಿಸಲು ಪಣತೊಟ್ಟಿರುವ ಭಕ್ತ ಗಣ ಈ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದೆ.
ಸಂಪ್ರದಾಯದಂತೆ ನಿತ್ಯ ಪೇಟೆ ಸವಾರಿ ನಡೆಯುತ್ತಿದ್ದು, ಶುಕ್ರವಾರದ ನಿನ್ನೆ ಬನ್ನೂರು, ಅಶೋಕ ನಗರ ರೈಲ್ವೇ ವಠಾರ ವ್ಯಾಪ್ತಿಯಲ್ಲಿ ಕಟ್ಟೆ ಪೂಜೆ ಸ್ವೀಕರಿಸಲಾಗಿದೆ. ಇದು ಹಲವು ದಶಕಗಳಿಂದ ನಡೆಯುತ್ತಿರುವ ನಿಗದಿತ ಕಾರ್ಯಕ್ರಮ. ಹಿಂದೆ ಕಬಕ ಪುತ್ತೂರು ರೈಲ್ವೆ ನಿಲ್ದಾಣವಿರುವ ಜಾಗ ಗದ್ದೆಯಾಗಿತ್ತು. ವಾರ್ಷಿಕ ಜಾತ್ರೆಯ ಪೇಟೆ ಸವಾರಿ ಹಾಗೂ ಕಟ್ಟೆ ಪೂಜೆ ಸಂದರ್ಭದಲ್ಲಿ ಶ್ರೀದೇವರು ಗದ್ದೆ ಮಾರ್ಗವಾಗಿ ಸಾಗುತ್ತಿದ್ದರು.
ಅಭಿವೃದ್ಧಿ ಗಾಳಿ ಬೀಸಲಾರಂಭಿಸಿದ ಮೇಲೆ ಗದ್ದೆಗೆ ಮಣ್ಣು ಹಾಕಿ ಏರಿಸಿ, ರೈಲ್ವೆ ನಿಲ್ದಾಣವನ್ನು ಸ್ಥಾಪಿಸಲಾಗಿದೆ. ರೈಲ್ವೆ ನಿಲ್ದಾಣ ಸ್ಥಾಪನೆಯಾದರೂ ದೇವರು ಹೋಗುವ ದಾರಿ ಬದಲಾಗಲಿಲ್ಲ. ಶ್ರೀದೇವರ ಪೇಟೆ ಸವಾರಿ ಸಂಪ್ರದಾಯದಂತೆ ಅದೇ ದಾರಿಯಲ್ಲಿ ನಡೆಯುತ್ತಿದೆ. ರೈಲ್ವೆ ಹಳಿಗಳನ್ನು ದಾಟಿ ದೇವರು ಕಟ್ಟೆ ಪೂಜೆಗೆ ತೆರಳುವುದೇ ಈಗ ಇಲ್ಲಿನ ವಿಶೇಷ ಅನ್ನಿಸಿದೆ,
ಅದೇ ಪ್ರಕಾರ ಶುಕ್ರವಾರದ ಕೊನೆಯ ಕಟ್ಟೆ ಪೂಜೆ ಸ್ವೀಕರಿಸಲು ರೈಲ್ವೆ ವಠಾರಕ್ಕೆ ದೇವರು ತೆರಳುವ ಸಂದರ್ಭದಲ್ಲೇ ಮಂಗಳೂರಿನಿಂದ ಹೊರಟಿದ್ದ ಗೂಡ್ಸ್ ರೈಲೊಂದು ಹಾದು ಹೋಗುವುದು ನಿಗದಿಯಾಗಿತ್ತು. ಹೀಗಾಗಿ ಎಚ್ಚೆತ್ತುಕೊಂಡ ರೈಲ್ವೆ ಸಿಗ್ನಲ್ ಮ್ಯಾನ್ ಶ್ರೀದೇವರು ಹಿಂದಿನ ಕಟ್ಟೆಯಿಂದ ಹೊರಡಲು ಅನುವಾಗುತ್ತಿದ್ದಂತೆ ಗೂಡ್ಸ್ ರೈಲಿನ ಆಪರೇಟರ್ ಗೆ ಸಂದೇಶ ರವಾನಿಸಿದ್ದಾರೆ. ಶ್ರೀದೇವರು ರೈಲ್ವೆ ಹಳಿಗಳನ್ನು ಇನ್ನು ಕೆಲವೇ ದಾಟಲಿದ್ದಾರೆ ಅನ್ನುವ ಸುದ್ದಿ ತಿಳಿಯುತ್ತಿದ್ದಂತೆ ಗೂಡ್ಸ್ ರೈಲು ತನ್ನ ವೇಗವನ್ನು ತಗ್ಗಿಸಿ ಪುತ್ತೂರು ನಿಲ್ದಾಣದಲ್ಲಿ ಬ್ರೇಕ್ ಹಾಕಿದೆ.
ಶ್ರೀ ದೇವರು ಹಾಗೂ ಭಕ್ತರು ರೈಲ್ವೆ ಹಳಿಗಳನ್ನು ದಾಟಿದ ಬಳಿಕ ರೈಲು ತನ್ನ ಪ್ರಯಾಣ ಬೆಳೆಸಿದೆ.
Discussion about this post