ಪುತ್ತೂರು : ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕಿತರ ಸೇವೆಗೈಯುತ್ತಿರುವವರ ಪೈಕಿ ಸಿಕ್ಕಾಪಟ್ಟೆ ಪ್ರಚಾರದಲ್ಲಿರುವುದು ರೇಣುಕಾಚಾರ್ಯ. ಹಾಗಂತ ಉಳಿದ ಶಾಸಕರು ಜನರೊಂದಿಗಿಲ್ಲ ಅಂತಲ್ಲ. ಹಲವಾರು ಶಾಸಕರು ತಮ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲ ಶಾಸಕರಿಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಎಂಥಾ ಆಯೋಗ್ಯನನ್ನು ಆಯ್ಕೆ ಮಾಡಿದೆವು ಎಂದು ಉಗಿಯುತ್ತಿದ್ದಾರೆ.
ಈ ನಡುವೆ ಕೊರೋನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರವನ್ನು ಪುತ್ತೂರಿನ ಶಾಸಕ ಸಂಜೀವ ಮಠಂದೂರು ನೆರವೇರಿಸಿದ್ದಾರೆ.

ಕೊರೋನಾ ವಿಚಾರದಲ್ಲಿ ತಮ್ಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಮಠಂದೂರು, ಗ್ರಾಮ ಗ್ರಾಮಗಳಲ್ಲಿ ಕೊರೋನಾ ನಿಯಂತ್ರಿಸುವ ಕುರಿತಂತೆ ಟಾಸ್ಕ್ ಫೋರ್ಸ್ ಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕೊರೋನಾ ನಿಯಂತ್ರಣ ಹಾಗೂ ಕೊರೋನಾ ಸೋಂಕಿತರ ಸೇವೆಯ ಸಲುವಾಗಿ ವಾರ್ ರೂಮ್ ತೆರೆದಿರುವ ಶಾಸಕರು ಜನರಿಗೆ ನೆರವಾಗುತ್ತಿದ್ದಾರೆ.
ಈ ನಡುವೆ ಕೊರೋನಾದಿಂದ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹದ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಮೂಲಕ ಜನರಲ್ಲಿ ವಿಶ್ವಾಸ ಹಾಗೂ ಧೈರ್ಯ ಮೂಡಿಸುವ ಕೆಲಸ ಮಾಡಿದ್ದಾರೆ.

ಚಿಕ್ಕಪುತ್ತೂರು ಮಡಿವಾಳ ಕಟ್ಟೆ ಸ್ಮಶಾನದಲ್ಲಿ ವಾರ್ ರೂಮ್ ಸದಸ್ಯರೊಂದಿಗೆ ತೆರಳಿ, ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಕೊರೋನಾ ಸೋಂಕಿತರ ಶವ ಸಂಸ್ಕಾರದಲ್ಲಿ ಪಾಲ್ಗೊಂಡ ಮೊದಲ ಶಾಸಕ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
Discussion about this post