ಬೆಂಗಳೂರು : ಚಂದನವನದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟಿ ಅಂದ್ರೆ ಅದು ರಾಧಿಕಾ ಕುಮಾರಸ್ವಾಮಿ ಅನ್ನುವುದರಲ್ಲಿ ಅನುಮಾನವೇ ಬೇಕಾಗಿಲ್ಲ.
ಯಾಕಂದ್ರೆ ಅದನ್ನು ಅವರೇ ಕೆಲ ದಿನಗಳ ಹಿಂದೆ ಬಹಿರಂಗಪಡಿಸಿದ್ದಾರೆ. ಆದರೆ ಈಗ ಸ್ಟಾರ್ ನಟರನ್ನೂ ಮೀರಿಸಿ ಅವರು ಸಂಭಾವನೆ ಪಡೆಯುತ್ತಾರೆಯೇ ಅನ್ನುವ ಅನುಮಾನವೆದ್ದಿದೆ.
ಕೆಲ ವಾರಗಳ ಹಿಂದೆ ಯುವರಾಜ ಸ್ವಾಮಿ ಅನ್ನುವ ಖತರ್ ನಾಕ್ ಖದೀಮನನ್ನು ಯಾವಾಗ ಸಿಸಿಬಿ ಪೊಲೀಸರು ಬಂಧಿಸಿದರೋ ಹಲವರ ಮುಖವಾಡಗಳು ಕಳಚಿ ಬಿದ್ದಿದೆ.
ರಾಜಕೀಯ ವ್ಯಕ್ತಿಗಳನ್ನೇ ಟಾರ್ಗೇಟ್ ಮಾಡಿಕೊಂಡಿದ್ದ ಈತ, ಕುರ್ಚಿಯ ಆಸೆ ತೋರಿಸಿ ಕೋಟಿ ಕೋಟಿ ಲೆಕ್ಕದಲ್ಲಿ ವಂಚಿಸುತ್ತಿದ್ದ.
ಇದೇ ಯುವರಾಜಸ್ವಾಮಿ ಆತ್ಮೀಯ ಬಳಗದಲ್ಲಿ ರಾಧಿಕಾ ಕುಮಾರಸ್ವಾಮಿಯೂ ಒಬ್ಬರಾಗಿದ್ದರು. ರಾಧಿಕಾ ಅವರಿಗೆ ಫ್ಯಾಮಿಲಿ ಅಸ್ಟ್ರಾಲಜರ್ ಆಗಿದ್ದ ಯುವರಾಜ ಸ್ವಾಮಿ, ಸ್ವೀಟಿ ಖ್ಯಾತಿಯ ನಟಿಯೊಂದಿಗೆ ವ್ಯವಹಾರಗಳನ್ನು ಕೂಡಾ ನಡೆಸುತ್ತಿದ್ದ ಎನ್ನಲಾಗಿದೆ.
ಅಷ್ಟೇ ಅಲ್ಲದೆ ರಾಧಿಕಾ ಅವರಿಗೂ ರಾಜಕೀಯವಾದ ಹುದ್ದೆಗಳ ಆಸೆ ತೋರಿಸಿದ್ದನಂತೆ.

ಯಾವಾಗ ರಾಧಿಕಾ ಕುಮಾರಸ್ವಾಮಿಗೂ ಯುವರಾಜ ಸ್ವಾಮಿಗೂ ನಂಟಿದೆ ಅನ್ನುವುದು ಗೊತ್ತಾಯೋ, ಪತ್ರಿಕಾಗೋಷ್ಟಿ ಕರೆದ ರಾಧಿಕಾ, ನಾಟ್ಯರಾಣಿ ಶಾಕುಂತಲೆ ಸಿನಿಮಾ ಸಲುವಾಗಿ 75 ಲಕ್ಷ ಹಣ ಪಡೆದಿದ್ದು ಹೌದು ಅಂದಿದ್ದಾರೆ.
15 ಲಕ್ಷ ಯುವರಾಜ್ ನೀಡಿದ್ರೆ ಯಾರೋ ಒಬ್ಬರು 60 ಕೊಟ್ಟಿದ್ದರು ಅಂದಿದ್ದಾರೆ.
ರಾಧಿಕಾ ಅವರು ಹೊಸ ಲೆಕ್ಕ ಕೊಡುತ್ತಿದ್ದಂತೆ ಆಲರ್ಟ್ ಆದ ಸಿಬಿ ಪೊಲೀಸರು ಯುವರಾಜ್ ಮತ್ತು ರಾಧಿಕಾ ಅವರನ್ನು ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಿದ್ದಾರೆ. ಆಗ ಗೊತ್ತಾಗಿದ್ದು ಐತಿಹಾಸ ಸಿನಿಮಾ ಹೆಸರಿನಲ್ಲಿ ರಾಧಿಕಾ ಅವರಿಗೆ 1 ಕೋಟಿ 25 ಲಕ್ಷ ಹಣ ಸಂದಾಯವಾಗಿದೆ ಅಂತಾ.
ಹೀಗಾಗಿ ಹೆಚ್ಚುವರಿಯಾಗಿ ಪ್ರಸ್ತಾಪವಾಗಿರುವ 50 ಲಕ್ಷದ ಮೂಲ ಹುಡುಕುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಈ ನಡುವೆ ದೊಡ್ಡ ದೊಡ್ಡ ಮೊತ್ತ ಪ್ರಸ್ತಾಪವಾಗುತ್ತಿರುವ ಕಾರಣ ಇಡೀ ಪ್ರಕರಣವನ್ನು ಕೇಂದ್ರದ ತನಿಖಾ ತಂಡದ ಕೈಗೆ ಒಪ್ಪಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿದೆ.
Discussion about this post