ಬೆಂಗಳೂರು : ನಾಡಿನೆಲ್ಲೆಡೆ ದಶರಥ ನಂದನ ಶ್ರೀರಾಮನ ಜನ್ಮ ದಿನದ ಸಂಭ್ರಮ. ಆದರೆ ವಿಶ್ವಕ್ಕೆ ಆವರಿಸಿರುವ ಕೊರೋನಾ ಕಾರ್ಮೋಡ ಎಲ್ಲಾ ಸಂಭ್ರಮಗಳನ್ನು ಮರೆ ಮಾಡಿದೆ. ಹಾಗಂತ ರಾಮನವಮಿಯನ್ನು ಆಚರಿಸದೇ ಇರಲು ಸಾಧ್ಯವೇ. ಖಂಡಿತಾ ಅಸಾಧ್ಯ. ಹೀಗಾಗಿ ಹಿಂದೂ ಧರ್ಮದ ನಂಬಿಕೆಯಂತೆ ಪ್ರತೀ ಮನೆ ಮನೆಯಲ್ಲೂ ರಾಮನಾಮಸ್ಮರಣೆ ನಡೆಯುತ್ತಿದೆ.
ಹಾಗಾದ್ರೆ ಶ್ರೀರಾಮನವಮಿಯ ಪೌರಾಣಿಕ ಹಿನ್ನಲೆಯೇನು ಗೊತ್ತಾ..?
ರಾಮಾಯಣದ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಮತ್ತು ಸುಮಿತ್ರೆ ಎಂಬ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ.
ಈ ದಿವ್ಯ ಪಾಯಸವನ್ನು ದಶರಥನು ತನ್ನ ಇಬ್ಬರು ಪತ್ನಿಯರಾದ ಕೌಸಲ್ಯೆ ಹಾಗೂ ಕೈಕೇಯಿಗೆ ಹಂಚುತ್ತಾನೆ. ಕೌಸಲ್ಯೆ ಹಾಗೂ ಕೈಕೇಯಿ ತಮಗೆ ಸಿಕ್ಕ ಪಾಯಸದಿಂದ ಒಂದಿಷ್ಟು ಪಾಲನ್ನು ಸುಮಿತ್ರೆಗೆ ನೀಡುತ್ತಾರೆ.
ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮ ಜನಿಸುತ್ತಾನೆ, ನಂತರದ ದಿನಗಳಲ್ಲಿ ಪುಷ್ಯ ನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಸುಮಿತ್ರೆಗೆ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸಲಾಗುತ್ತದೆ.
Discussion about this post