ಬೆಂಗಳೂರು : ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಕಾಮಲೀಲೆಯ ಸಿಡಿ ಅಸಲಿಯೋ ನಕಲಿಯೋ ಅನ್ನುವುದು ಬಹಿರಂಗವಾಗುವ ಮುನ್ನವೇ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ.
ಪ್ರಸ್ತುತ ಬೆಳವಣಿಗೆಯಲ್ಲಿ ಸಿಡಿ ನಕಲಿಯಾಗಿರುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗಿದೆ.
ಇಷ್ಟು ದಿನಗಳ ಕಾಲ ಸಿಡಿಕೋರರ ವಿರುದ್ಧವಿದ್ದ ಪ್ರಕರಣ ಇದೀಗ ಏಕಾಏಕಿ, ರಮೇಶ್ ಜಾರಕಿಹೊಳಿ ವಿರುದ್ಧ ತಿರುಗಿಕೊಳ್ಳುವ ಲಕ್ಷಣ ಗೋಚರಿಸಿದೆ. ನಿನ್ನೆ ತನಕ ಸಿಡಿ ಲೇಡಿಯ ಪರವಾಗಿ ನಿಂತಿದ್ದವರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. ಸದನದಲ್ಲಿ ಸರ್ಕಾರದ ನಿಲುವು ಹೇಗಿರುತ್ತದೆ ಅನ್ನುವುದನ್ನು ತಿಳಿಯಬೇಕಾಗಿತ್ತು.
ಯಾವಾಗ ಸರ್ಕಾರ ರಮೇಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿತೋ, ಸಿಡಿ ಲೇಡಿಯ ತಂತ್ರವೇ ಬದಲಾಗಿದೆ. ಈ ಹಿನ್ನಲೆಯಲ್ಲಿಯೇ ಸಿಡಿ ಲೇಡಿ, ವಕೀಲ ಜಗದೀಶ್ ಮೂಲಕ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.

ದೂರು ಸಲ್ಲಿಕೆಯಾದ ಬಳಿಕ ಪೊಲೀಸರ ನಡೆ ಹೇಗಿರುತ್ತದೆ ಅನ್ನುವುದರ ಮೇಲೆ ಎಲ್ಲವೂ ನಿಂತಿದೆ. ಒಂದು ವೇಳೆ ಸಂತ್ರಸ್ಥ ಯುವತಿ ಕೊಟ್ಟಿರುವ ದೂರು ಪ್ರಬಲವಾಗಿದ್ದರೆ ಪೊಲೀಸರು ರಮೇಶ್ ಜಾರಕಿಹೊಳಿ ವಿರುದ್ಧ ಕಠಿಣ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಬೇಕಾಗುತ್ತದೆ.
ಜೊತೆಗೆ ಎಸ್ಐಟಿ ಈವರೆಗೆ ಕೈಗೊಂಡಿರುವ ಕ್ರಮಗಳು ಕೂಡಾ ವ್ಯರ್ಥವಾಗುವ ಸಾಧ್ಯತೆಗಳಿದೆ. ಈ ನಡುವೆ ವಕೀಲ ಜಗದೀಶ್ ಸಂತ್ರಸ್ಥ ಯುವತಿ ಪರವಾಗಿ ದೂರು ಸಲ್ಲಿಸಲಿದ್ದಾರೆ ಅನ್ನುವ ಸುದ್ದಿ ಸಿಕ್ಕ ಬೆನ್ನಲ್ಲೇ ಬೆಂಗಳೂರು ಪೊಲೀಸ್ ಆಯುಕ್ತರು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ.

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಕಮಲ್ ಪಂಥ್, ಕಾನೂನು ಪ್ರಕಾರ ನಾವು ಕ್ರಮ ಕೈಗೊಳ್ಳುತ್ತೇವೆ. ದೂರುಗಳು ಕ್ರಮ ಬದ್ಧವಾಗಿರಬೇಕು ಅಂದಿದ್ದಾರೆ.
ಜೊತೆಗೆ ಗೃಹ ಸಚಿವರು ಯುವತಿ ಹಾಗೂ ಯುವತಿಯ ಪೋಷಕರಿಗೆ ಸೂಕ್ತ ಭದ್ರತೆಯ ಭರವಸೆಯನ್ನು ನೀಡಿದ್ದಾರೆ.
Discussion about this post