ಕೊರೋನಾ ಆತಂಕದ ನಡುವೆಯೇ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಯಾಗಿದೆ.
ನಿರೀಕ್ಷೆಯಂತೆ ಚಿತ್ರಕ್ಕೆ ಉತ್ತಮದ ರೆಸ್ಪಾನ್ಸ್ ಸಿಕ್ಕಿದ್ದು, ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆಯುವ ಎಲ್ಲಾ ಲಕ್ಷಣಗಳನ್ನು ತೋರಿಸಿದೆ.ಮಾತ್ರವಲ್ಲದೆ ಚಂದನವನದ ಇತಿಹಾಸದ ಪುಟದಲ್ಲೂ ರಾಬರ್ಟ್ ಚಿತ್ರದ ಹೆಸರು ದಾಖಲಾಗಲಿದೆ ಎನ್ನಲಾಗುತ್ತಿದೆ.
ಈ ನಡುವೆ ನೆಚ್ಚಿನ ನಾಯಕನ ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸಿರುವ ಅಭಿಮಾನಿಗಳು ದರ್ಶನ್ ಕಟೌಟ್ ಗೆ ಹಾಲಿನ ಅಭಿಷೇಕಗೈದು ಸಂತಸ ಪಟ್ಟಿದ್ದಾರೆ.
ಇನ್ನು ಕೆಲ ಕಡೆಗಳಲ್ಲಿ ದರ್ಶನ್ ಅಭಿಮಾನಿಗಳು ಅತಿರೇಕದ ವರ್ತನೆ ಕೂಡಾ ತೋರಿದ್ದಾರೆ.
ಚಿತ್ರದುರ್ಗದಲ್ಲಿ ರಾಬರ್ಟ್ ಸಿನಿಮಾ ವೀಕ್ಷಣೆಗಾಗಿ ಮಧ್ಯರಾತ್ರಿಯಿಂದಲೇ ಚಿತ್ರಮಂದಿರದ ಮುಂದೆ ಕಾದು ಕೂತಿದ್ದ ಅಭಿಮಾನಿಗಳು ಬೆಳಕು ಹರಿಯುತ್ತಲೇ ತಳ್ಳಾಟ ನೂಕಾಟ ನಡೆಸಿದ್ದಾರೆ.
ಹೀಗಾಗಿ ಅಭಿಮಾನಿಗಳನ್ನು ನಿಯಂತ್ರಿಸಲು ವೆಂಕಟೇಶ್ವರ ಚಿತ್ರ ಮಂದಿರದ ಬಳಿ ಪೊಲೀಸರು ಲಾಠಿ ಬೀಸಿದ್ದಾರೆ.
ಯಾದಗಿರಿಯ ಶಹಪುರದ ಜಯಶ್ರೀ ಟಾಕೀಸ್ ನಲ್ಲಿ ಅಭಿಮಾನಿಗಳ ನೂಕು ನುಗ್ಗಲು ಗದ್ದಲದಲ್ಲಿ ಚಿತ್ರಮಂದಿರದ ಮುಖ್ಯ ದ್ವಾರದ ಗ್ಲಾಸ್ ಪುಡಿ ಪುಡಿಯಾಗಿದೆ.
ಕೊಪ್ಪಳದಲ್ಲೂ ಅಭಿಮಾನಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಗಂಗಾವತಿ ಚಂದ್ರಹಾಸ ಚಿತ್ರಮಂದಿರದ ಗೇಟ್ ಮುರಿಯಲು ಯತ್ನಿಸಿದ ಘಟನೆ ನಡೆದಿದೆ. ಇಲ್ಲೂ ಸ್ಕ್ರೀನ್ ಮುಂದೆ ಇದ್ದ ಅಭಿಮಾನಿಗಳನ್ನ ಚದುರಿಸಲು ಥಿಯೇಟರ್ ಒಳಗಡೆಯೇ ಪೊಲೀಸರು ಲಾಠಿಜಾರ್ಜ್ ಮಾಡಿದ್ದಾರೆ.
Discussion about this post