ಶ್ರೀರಾಮಸೇನೆ ಸಂಘಟನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಯಶಸ್ವಿನಿ ಗೌಡ ಅವರನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇಮಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ನಡೆದ ಸಮಾರಂಭದಲ್ಲಿ ಯಶಸ್ವಿನಿ ಗೌಡ ಅವರನ್ನು ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು.
ಯಶಸ್ವಿನಿ ಗೌಡ ರೌಡಿ ಶೀಟರ್ ಆಗಿದ್ದು ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಯಶಸ್ವಿನಿ ಗೌಡ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣವಿದ್ದು, ಇಂಥ ರೌಡಿ ಶೀಟರ್ಗೆ ಅಧಿಕಾರ ಕೊಟ್ಟಿದ್ದು ಎಷ್ಟು ಸರಿ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಯಶಸ್ವಿನಿ ಪತಿ ಮಹೇಶ್ ಕೂಡ ರೌಡಿ ಶೀಟರ್. ಮಹೇಶ್ ಯಶಸ್ವಿನಿ ಅವರ ಎರಡನೇ ಪತಿಯಾಗಿದ್ದು ಪುಟ್ಟೇನಹಳ್ಳಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾರೆ. ತಮ್ಮ ಮೊದಲ ಪತಿಯ ಕೊಲೆಯಲ್ಲಿ ಯಶಸ್ವಿನಿ ಗೌಡ ವಿರುದ್ಧ ಆರೋಪ ಕೂಡ ಕೇಳಿಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಮೋದ್ ಮುತಾಲಿಕ್, ಸೇನೆಯ ಪದ್ಧತಿ ಪ್ರಕಾರ ಅವರನ್ನು ಆಯ್ಕೆ ಮಾಡಲಾಗಿದೆ. ರೌಡಿಶೀಟರ್ ಅನ್ನೋದು ಇವತ್ತು ಒಂದು ಫ್ಯಾಷನ್ ಆಗಿದೆ. ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕೂಡ ರೌಡಿಶೀಟ್ ಓಪನ್ ಮಾಡಲಾಗಿದೆ ಎಂದಿದ್ದಾರೆ. ನ್ಯಾಯಾಲಯದಲ್ಲಿ ಆರೋಪಿಯೆಂದು ಸಾಬೀತಾದರೆ ನಾವು ಅವರನ್ನು ಹುದ್ದೆಯಿಂದ ಕೆಳಗೆ ಇಳಿಸುತ್ತೇವೆ ಎಂದು ಹೇಳಿದ್ದಾರೆ.
ಶ್ರೀರಾಮ ಸೇನೆ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿಕೊಂಡ ಮೇಲೆ ಮಾತನಾಡಿದ ಯಶಸ್ವಿನಿ ಗೌಡ, ಆರ್.ಟಿ.ನಗರದ ಅಂದಿನ ಇನ್ಸ್ ಪೆಕ್ಟರ್ ಕಾರಣದಿಂದ ರೌಡಿ ಶೀಟ್ ಓಪನ್ ಆಗಿದೆ. ಪ್ರಕರಣವೊಂದರಲ್ಲಿ ನಾನೇ ದೂರು ಕೊಟ್ಟು ಅವರನ್ನು ಅಮಾನತ್ತು ಮಾಡಿಸಿದ್ದೆ. ಇದರಿಂದಲೇ ಅವರು ನನ್ನ ವಿರುದ್ಧ ರೌಡಿಶೀಟ್ ಓಪನ್ ಮಾಡಿಸಿದರು ಎಂದಿದ್ದಾರೆ. ನಾನು ಯಾವ ಮಹಿಳೆಗೂ ಹೊಡೆದಿಲ್ಲ. ದೂರು ನೀಡಿದ್ದವರು ಕೋರ್ಟ್ನಲ್ಲಿ ರಾಜಿಯಾಗಿದ್ದಾರೆ. ಇವತ್ತಿನವರೆಗೂ ಯಾವುದೇ ಠಾಣೆಯಿಂದ ನೋಟಿಸ್ ಬಂದಿಲ್ಲ. ರೌಡಿಗಳೇನಾದರೂ ಸಮಾಜಸೇವೆ ಮಾಡಬಾರದು ಎಂದಿದೆಯಾ ಎಂದು ಪ್ರಶ್ನಿಸಿದ್ದಾರೆ.
ರೌಡಿ ಶೀಟರ್ ಪಟ್ಟ ಹೊಂದಿರುವವರಿಗೆ ಹಿಂದೂ ಸಂಘಟನೆಯ ಜವಾಬ್ದಾರಿ ಕೊಟ್ಟರೆ ಹೇಗೆ ಅನ್ನುವುದು ನಮ್ಮ ಪ್ರಶ್ನೆ. ಪ್ರಮೋದ್ ಮುತಾಲಿಕ್ ಮೇಲೆ ಸಾಕಷ್ಟು ಗೌರವ ಇತ್ತು. ಹಿಂದೂ ಸಂಘಟನೆಯ ಮುಖಂಡನಾಗಿ ಮಾಡಿದ ಕೆಲಸದ ಬಗ್ಗೆ ಪ್ರೀತಿ ಇತ್ತು. ಆದರೆ ಈಗ ರೌಡಿ ಶೀಟರ್ ಗಳು ಸಂಘಟನೆ ಒಳಗೆ ಬಂದರೆ ಸಮಾಜಕ್ಕೆ ಅದ್ಯಾವ ಪಾಠ ಹೇಳಲು ಸಾಧ್ಯ.
Discussion about this post