ವರನಟ ಡಾ. ರಾಜ್ಕುಮಾರ್ ಜೊತೆ ತ್ರಿಮೂರ್ತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಸುರೇಖಾ (66) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವಿವಾಹಿತರಾಗಿದ್ದ ಅವರು ಸಹೋದರಿಯರೊಂದಿಗೆ ವಾಸಿಸುತ್ತಿದ್ದರು.
160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುರೇಖಾ ಡಾ. ರಾಜ್ ಕುಮಾರ್ ಅಭಿನಯದ ತ್ರಿಮೂರ್ತಿ, ಒಲವು ಗೆಲುವು, ಗಿರಿ ಕನ್ಯೆ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಹುಲಿಯ ಹಾಲಿನ ಮೇವು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಮಾಯಾ ಮನುಷ್ಯ, ನಾನು ಬಾಳಬೇಕು, ಮಣ್ಣಿನ ಮಕ್ಕಳು, ಸಂಭ್ರಮ, ಕಿಂಗ್, ಶಂಕರ್ ಸುಂದರ್, ಆಲೆಮನೆ, ಬಿಳಿಗಿರಿಯ ಬನದಲ್ಲಿ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರು, ತಾಯಿ ದೇವರು, ಶಿವಕನ್ಯೆ, ಕಾವೇರಿ, ಕೆಸರಿನ ಕಮಲ, ಬ್ಯಾಂಕರ್ ಮಾರ್ಗಯ್ಯ, ನಾಗರ ಹೊಳೆ ಸೇರಿದಂತೆ 150ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜೊತೆಗೆ ತಮಿಳಿನ ‘ನಾನು ಅವನಿಲ್ಲೈ’ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು.

ಸೆನ್ಸಾರ್ ಬೋರ್ಡ್ ಸದಸ್ಯೆಯಾಗಿ ಹಾಗೂ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ ಹಿರಿಮೆ ಇವರದ್ದು.
ಭರತ ನಾಟ್ಯ ಮತ್ತು ಕೂಚುಪುಡಿ ನೃತ್ಯಗಾರ್ತಿ ಆಗಿದ್ದ ಸುರೇಖಾ, ಲಂಡನ್, ಪ್ಯಾರಿಸ್ ಸೇರಿ ವಿದೇಶಗಳಲ್ಲಿಯೂ ಪ್ರದರ್ಶನ ನೀಡಿದ್ದರು.

ಪಾರ್ವತಮ್ಮ ರಾಜ್ಕುಮಾರ್ 1975ರಲ್ಲಿ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯನ್ನು ಹುಟ್ಟು ಹಾಕಿದರು. ತಮ್ಮ ಬ್ಯಾನರ್ನಲ್ಲಿ ನಿರ್ಮಿಸಿದ ಮೊದಲ ಸಿನಿಮಾ ತ್ರಿಮೂರ್ತಿ. ಡಾ. ರಾಜ್ಕುಮಾರ್ ಅಭಿನಯದ ‘ತ್ರಿಮೂರ್ತಿ’ಯಲ್ಲಿ ನಾಯಕಿಯಾಗಿದ್ದವರು ಇದೇ ಸುರೇಖಾ.
Discussion about this post