ಈ ಬಾರಿಯ ಸರಿಗಮಪ ಒಂದಲ್ಲ ಒಂದು ಕಾರಣಕ್ಕೆ ಗಮನ ಸೆಳೆಯುತ್ತಿದೆ. ಟಿಆರ್ಪಿ ಗಿಮಿಕ್ ಗಳ ನಡುವೆ ಹಳ್ಳಿಯ ಮುಗ್ಧ ಪ್ರತಿಭೆಗಳು ಈ ಬಾರಿ ವೇದಿಕೆ ಹತ್ತಿವೆ ಅನ್ನುವುದು ಖುಷಿಯ ವಿಚಾರ.
ಈ ಬಾರಿ ಗಮನ ಸೆಳೆದ ಯುವ ಪ್ರತಿಭೆಗಳನ್ನು ನಿಮಗೆ ಪರಿಚಯಿಸುವುದು ನಮ್ಮ ಉದ್ದೇಶ. ಈ ಪೈಕಿ ಮೊದಲ ಪ್ರತಿಭೆ ಹನುಮಂತ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರಬಡ್ನಿ ತಾಂಡಾದ ಹನುಮಂತನಿಗೆ ಬರೋದು ನಾಲೈದು ಹಾಡುಗಳು.ಆದರೆ ಈ ನಾಲ್ಕೈದು ಹಾಡುಗಳನ್ನು ಆಲಿಸಿದರೆ ಲಕ್ಷ ಹಾಡು ಆಲಿಸಿದಷ್ಟೇ ಖುಷಿ ಕೊಡುತ್ತದೆ.
ಭಾನುವಾರ ಈತ ಹಾಡುತ್ತಿದ್ದರೆ ಇಡೀ ಕರ್ನಾಟಕ ತಲೆತೂಗಿತು. ವೇದಿಕೆ ಮುಂಭಾಗದಲ್ಲಿದ್ದ ತೀರ್ಪುಗಾರರು ಕ್ಷಣ ಮಾತ್ರದಲ್ಲೇ ಕಣ್ಣು ತೆರೆದರು. ಹಂಸಲೇಖ ಅವರಂತು ತನ್ನ ಕುತ್ತಿಗೆಯಲ್ಲಿದ್ದ ಕೌದಿಯನ್ನು ಹನುಮಂತನಿಗೆ ಹಾಕಿ ಬೆನ್ನು ತಟ್ಟಿದರು. ಹಳ್ಳಿಯ ಮುಗ್ಧ ಪ್ರತಿಭೆ ಪಾಲಿಗೆ ಕೌದಿಯ ಹೊದಿಕೆ ಅಂತರ ರಾಷ್ಟ್ರೀಯ ಮಟ್ಟದ ಗೌರವಕ್ಕೆ ಸಮಾನ ಅನ್ನುವುದರಲ್ಲಿ ಎರಡು ಮಾತಿಲ್ಲ.
ಇದೀಗ ಹನುಮಂತನ ಮಂತ್ರ ಮುಗ್ಧ ದನಿಗೆ ಎಲ್ಲರೂ ತಲೆ ತೂಗಿದ್ದಾರೆ. ಹಾಡನ್ನು ಮೆಚ್ಚಿದವರು ಆತನ ಮುಗ್ಥತೆ ನೋಡಿ ಮನಸೋತಿದ್ದಾರೆ.
ಇನ್ನು ಹನಮಂತ ವೇದಿಕೆಯಲ್ಲೇ ಅದೆಷ್ಟು ಮುಗ್ಧನಾಗಿದ್ದ ಅಂದರೆ, ವಿಜಯ್ ಪ್ರಕಾಶ್ ಹೊಗಳುತ್ತಿದ್ದರೆ, ನಾನೇನು ಅವರಿಗೆ ಪ್ರತಿಕ್ರಿಯೆ ನೀಡಬೇಕು ಎಂದು ಅನುಶ್ರೀಯನ್ನು ಪ್ರಶ್ನಿಸುತ್ತಿದ್ದ. ಹನುಮಂತ ತಲೆ ಕೆರೆದುಕೊಳ್ಳುವ ಶೈಲಿ ಮುಂದಿನ ದಿನಗಳಲ್ಲಿ ವೈರಲ್ ಆದರೆ ಅಚ್ಚರಿಯಿಲ್ಲ.
ಇನ್ನು ಅಜಯ್ ಜನ್ಯರನ್ನು ಗುರುತಿಸಿದ ರೀತಿಯಂತು ಹನುಮಂತನ ಮುಗ್ಧತೆಗೆ ಮತ್ತೊಂದು ಸಾಕ್ಷಿ.
ಇನ್ನು ಕಾರ್ಯಕ್ರಮದ ಬಗ್ಗೆ ಏನು ಅನ್ನಿಸುತ್ತಿದೆ ಅಂದರೆ ಹನುಮಂತನಿಗೆ ನೆನಪಾಗಿದ್ದು ತನ್ನೂರು, ತನ್ನೊಂದಿಗೆ ಕಾಲ ಕಳೆಯುತ್ತಿದ್ದ ಕುರಿಗಳು. ಊರು ನೆನಪಾಗಿದ್ದೇ ತಡ ಮುಗ್ಧ ಪ್ರತಿಭೆ ಕಣ್ಣಂಚು ಒದ್ದೆಯಾಗಿತ್ತು.
5ನೇ ತರಗತಿ ಓದಿರುವ ಹನುಮಂತ ಯಾವುದೇ ಸಂಗೀತ ಶಿಕ್ಷಣ ಪಡೆದಿಲ್ಲ.ನಿತ್ಯ ಕುರಿಗಳ ಹಿಂಡುಗಳ ಜೊತೆ ಕಾಲ ಕಳೆಯುವ ಹನುಮಂತ ಶಿಶುನಾಳ ಷರೀಫರ ಹಾಡುಗಳನ್ನು ಮೊಬೈಲ್ನಲ್ಲಿ ಕೇಳುತ್ತಾ ಹಾಡು ಕಲಿತವರು.
ಸಂಗೀತ ನಂಗೆ ಬರಲ್ಲ ಕಣ್ರೀ….ಮೂರು ನಾಲ್ಕು ಹಾಡು ಬರುತ್ತೆ ಎಂದು ಹೇಳುವ ಹನುಮಂತನಿಗೆ ಈಗಾಗಲೇ ಲಕ್ಷಾಂತರ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ.
ಇವನು ಕುರಿ ಕಾಯಿಸುವವನು ಅಷ್ಟು ಜನಪದ ತಜ್ಞರ ಕನಸು, ಶೃತಿಯಲ್ಲಿ ಶುದ್ಧವಾಗಿದ್ದಾನೆ, ಹೃದಯಲ್ಲಿ ಶ್ರೇಷ್ಟವಾಗಿದ್ದಾನೆ ಅನ್ನುವ ಹಂಸಲೇಖ ಸಾಲುಗಳು ಹನುಮಂತ ಪ್ರತಿಭೆಗೆ ಸಂದ ಗೌರವ ಅನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ವಿಜಯ್ ಪ್ರಕಾಶ್ ಕೊಟ್ಟ ಪ್ರಶಂಸೆಯಂತು ನಿಜಕ್ಕೂ ಹನುಮಂತನ ಬದುಕಿಗೆ ದಾರಿದೀಪ.
ಒಟ್ಟಿನಲ್ಲಿ ಇಂತಹುದೊಂದು ಪ್ರತಿಭೆಗೆ ಅವಕಾಶ ಕೊಟ್ಟ ಝೀ ಕನ್ನಡ ಹಾಗೂ ರಾಘವೇಂದ್ರ ಹುಣಸೂರು ಅವರಿಗೆ ಸಂಗೀತ ಪ್ರೇಮಿಗಳ ಮತ್ತು ಕನ್ನಡಿಗರ ಪರವಾಗಿ ಧನ್ಯವಾದಗಳು.
Discussion about this post