ಟೈಟಲ್ ಮೂಲಕವೇ ಗಮನ ಸೆಳೆದ ಸವರ್ಣದೀರ್ಘ ಸಂಧಿ ಕನ್ನಡ ಮಹತ್ವ ಜೊತೆಗೆ ಜನರಿಗೆ ಕನ್ನಡ ವ್ಯಾಕರಣ ಪಾಠ ಮಾಡುತ್ತಾ ಗಮನ ಸೆಳೆದಿದೆ. ಇನ್ನೊಂದು ಕಡೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿರುವ ಭರಾಟೆ ಚಿತ್ರದ ನಡುವೆ ಸವರ್ಣದೀರ್ಘ ಸಂಧಿಯನ್ನು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದಾರೆ.
ಸವರ್ಣದೀರ್ಘ ಸಂಧಿ ಗಮನ ಸೆಳೆಯಲು ಸಾಕಷ್ಟು ಅಂಶಗಳಿವೆ. ಕನ್ನಡ ಭಾಷೆಯ ಕಂಪನ್ನು ಬೀರುತ್ತಾ ಪದಗಳ ಮತ್ತು ವ್ಯಾಕರಣದ ಮಹತ್ವವನ್ನು ಚಿತ್ರವು ಹಾಸ್ಯ ರೂಪದಲ್ಲಿ ಪ್ರೇಕ್ಷಕನಿಗೆ ತಿಳಿಸುವ ಪ್ರಯತ್ನ ನಡೆಸಿದೆ. ಅದರಲ್ಲಿ ನಿರ್ದೇಶಕ ವೀರೇಂದ್ರ ಶೆಟ್ಟಿ ಬಹುತೇಕ ಯಶಸ್ವಿಯೂ ಆಗಿದ್ದಾರೆ.
ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಹೊಸಬರು. ಆದರೆ ಅನುಭವಿ ನಟರಂತೆ ಕಾಣಿಸಿಕೊಂಡಿದ್ದಾರೆ. ಭರಾಟೆಯಲ್ಲಿ ದೊಡ್ಡ ನಟರ ದಂಡೇ ಇದ್ದರು ಆ್ಯಕ್ಷನ್, ಹಾಡುಗಳನ್ನು ಹೊರತುಪಡಿಸಿದ ಕೆಲವು ದೃಶ್ಯಗಳು ಬೋರ್ ಹೊಡೆಸುತ್ತವೆ. ಆದರೂ ಭರಾಟೆ ಪಕ್ಕಾ ಕಮರ್ಷಿಯಲ್ ಸಿನಿಮಾ.
ಭರಾಟೆಯಿಂದ ಸವರ್ಣದೀರ್ಘ ಸಂಧಿಗೆ ಪ್ರೇಕ್ಷಕರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಕನ್ನಡ ಸೊಗಡಿನ ಅಪ್ಪಟ ಮನರಂಜನೆಯ ಮೂಲಕ ಚಿತ್ರ ಆಕರ್ಷಣೀಯವಾಗಿದೆ.
ಸವರ್ಣದೀರ್ಘ ಸಂಧಿಯಲ್ಲಿ ನಾಯಕನಾಗಿ ನಿರ್ದೇಶಕನಾಗಿ ಸಂಭಾಷಣೆಕಾರನಾಗಿ ವೀರೇಂದ್ರ ಶೆಟ್ಟಿ ಮಲ್ಟಿ ಕೆಲಸಗಳನ್ನ ಮಾಡಿ ಮ್ಯಾಜಿಕ್ ಮಾಡಿದ್ದಾರೆ.. ಅಭಿನಯದಲ್ಲಿ ಸೂಪರ್ ಎನ್ನಿಸಿಕೊಂಡರೆ ಡೈಲಾಗ್ ನಲ್ಲಿ ಎಕ್ಸೆಲೆಂಟ್ ಅನ್ನಿಸಿಕೊಂಡಿದ್ದಾರೆ.
ನಾಯಕಿ ಕೃಷ್ಣ ಚೊಚ್ಚಲ ಚಿತ್ರದಲ್ಲೇ ಮೆಚ್ಚುವಂತಹ ನ್ಯಾಚ್ಯುರಲ್ ಅಭಿನಯ ಮಾಡಿದ್ದಾರೆ. ಪದ್ಮಜರಾವ್ ಸೇರಿದಂತೆ ಉಳಿದ ತಾರಾಗಣ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿವೆ.
ಸವರ್ಣದೀರ್ಘ ಸಂಧಿಯಲ್ಲಿ ಲೋಕನಾಥ್ ಕ್ಯಾಮೆರಾ ಕೈಚಳಕ ಎದ್ದು ಕಾಣುತ್ತದೆ. ಸಂಕೇತ್ ಶಿವಪ್ಪ ಸಂಕಲನ ಮೋಡಿ ಮಾಡಿದೆ. ಮನೋಮೂರ್ತಿಯವರ ಸಂಗೀತ ಚಿತ್ರಕ್ಕೆ ಮಾಧುರ್ಯದ ಟಚ್ ನೀಡಿದೆ. ಕನ್ನಡ ಪ್ರೇಕ್ಷಕರನ್ನು ರಂಜಿಸುವಲ್ಲಿ ಸವರ್ಣದೀರ್ಘ ಸಂಧಿ ಯಶಸ್ವಿಯಾಗಿದೆ.. ಇದರಲ್ಲಿ ನಗುವಿದೆ.. ಪ್ರೀತಿಯಿದೆ.. ಎಮೋಷನ್ ಸಹ ಇದೆ.
ಕನ್ನಡದ ಕಂಪು ಇಂಪು ಇರುವ ಚಿತ್ರವನ್ನು ಕನ್ನಡಿಗರು ಪ್ರೀತಿಯಿಂದ ನೋಡುತ್ತಿದ್ದಾರೆ. ಚರ್ವಿತ ಚರ್ವಣ ಆ್ಯಕ್ಷನ್ ಚಿತ್ರಗಳಿಗಿಂತ ಭಿನ್ನ ಪ್ರಯತ್ನದ ಚಿತ್ರವನ್ನು ಪ್ರೇಕ್ಷಕ ಇಷ್ಟಪಡುತ್ತಾನೆ ಎಂಬುದಕ್ಕೆ ಸವರ್ಣದೀರ್ಘ ಸಂಧಿ ಉದಾಹರಣೆಯಾಗಿದೆ.
Discussion about this post