ಬೆಂಗಳೂರು : ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಕೊರೋನಾ ಅಬ್ಬರಿಸುತ್ತಿದೆ. ಎಲ್ಲಿ ನಮ್ಮಲ್ಲಿಗೂ ಬಂದು ತಲುಪುತ್ತದೋ ಅನ್ನುವ ಆತಂಕದಲ್ಲಿ ಭಾರತೀಯರಿದ್ದರು.
ಈ ನಡುವೆ ಕೊರೋನಾ ಎದುರಿಸಲು ಭಾರತ ಕೂಡಾ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿತ್ತು.
ಅದು 24 January 2020. ವುಹಾನ್ ನಲ್ಲಿ ಕಾಡುತ್ತಿದ್ದ ನಿಗೂಢ ವೈರಸ್ ಕಾರಣದಿಂದ ವುಹಾನ್ ನಿಂದ ವಿದ್ಯಾರ್ಥಿಯೊಬ್ಬಳು ಕೇರಳ ತ್ರಿಶೂರ್ ಗೆ ಬಂದಿಳಿದಳು.
ಬಂದು ನಾಲ್ಕು ದಿನ ಕಳೆಯುವಷ್ಟರಲ್ಲಿ ವಿದ್ಯಾರ್ಥಿನಿಗೆ ಒಣ ಕೆಮ್ಮು ಕಾಣಿಸಿಕೊಂಡಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಅಲ್ಲಿಗೆ ಚೈನಾ ವೈರಸ್ ಭಾರತದ ಬಾಗಿಲು ಬಡಿಯುತ್ತಿದೆ ಅಂದಾಯ್ತು. ವಿದ್ಯಾರ್ಥಿನಿಯ ಹಲವು ಮಾದರಿಗಳನ್ನು ಪರೀಕ್ಷೆ ಕಳುಹಿಸಲಾಯ್ತು. ಜನರಿಗೆ 30 ರಂದು ಬಂದ ವರದಿ… ಹೌದು ಅದು ಕೊರೋನಾ ಪಾಸಿಟಿವ್
ಈ ಮೂಲಕ ಭಾರತದಲ್ಲಿ ಕೊರೋನಾ ಕೇಸ್ ಪತ್ತೆಯಾಗಿ ಇಂದಿಗೆ 1 ವರ್ಷ ಪೂರ್ಣಗೊಂಡಿದೆ.
ದೇಶದ ಮೊದಲ ಮೂರು ಕೊರೋನಾ ಕೇಸ್ ಗಳು ಪತ್ತೆಯಾಗಿದ್ದು ಕೇರಳದಲ್ಲಿ. ಇಡೀ ವಿಶ್ವವೇ ತಿರುಗಿ ನೋಡುವಂತೆ ಕೊರೋನಾವನ್ನು ನಿಯಂತ್ರಿಸಿದ್ದ ಕೇರಳ ಇದೀಗ ಮಾತ್ರ ಎಡವಿ ಬಿದ್ದಿದೆ.
ಬಹುತೇಕ ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಇಳಿ ಮುಖವಾಗುತ್ತಿದ್ದರೆ ಕೇರಳದಲ್ಲಿ ಮಾತ್ರ ಕೊರೋನಾ ಅಬ್ಬರ ಮುಂದುವರಿದಿದೆ.
ಪಿಣರಾಯಿ ಸರ್ಕಾರ ಕೊರೋನಾ ನಿಯಂತ್ರಣ ವಿಚಾರದಲ್ಲಿ ಸಂಪೂರ್ಣ ವಿಫಲ ಅನ್ನುತ್ತಿದೆ ಪ್ರತಿಪಕ್ಷಗಳು.
ಜನವರಿ 30 ರಂದು ಕೇರಳದ ತ್ರಿಶೂರ್ ನಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿತ್ತು. ಚೀನಾದ ವುಹಾನ್ ನಿಂದ ಆಗಮಿಸಿದ್ದ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿತ್ತು.
ಇದು ಭಾರತದ ಮೊದಲ ಕೊರೋನಾ ಪ್ರಕರಣವಾದರೆ, ಫೆ 2 ರಂದು ಆಲಪುಳ್ಳದಲ್ಲಿ ಹಾಗೂ 3ನೇ ಕೇಸ್ ಕಾಸರಗೋಡಿನಲ್ಲಿ ಪತ್ತೆಯಾಗಿತ್ತು.
ಅಲ್ಲಿಂದ ಪ್ರಾರಂಭವಾದ ಸೋಂಕಿನ ಅಟ್ಟಹಾಸ ಇನ್ನೂ ಮುಂದುವರಿದಿದ್ದು ಒಂದೇ ವರ್ಷದಲ್ಲಿ 1.07 ಕೋಟಿ ಮಂದಿಗೆ ಸೋಂಕು ತಗುಲಿದೆ.
ಕೊರೋನಾ ಆತಂಕದ ನಡುವೆ ಅಧಿವೇಶನಗಳನ್ನು ನಡೆಸಲು ರಾಜಕಾರಣಿಗಳು ಹಿಂಜರಿದರೂ ಶಾಲಾ ಕಾಲೇಜುಗಳು ಪ್ರಾರಂಭವಾಗಿದೆ. ಜೊತೆಗೆ ಹಲವು ಚುನಾವಣೆಗಳು ನಡೆದಿದೆ.
ಇದೀಗ ಚೈನಾ ವೈರಸ್ ಸೋಲಿಸುವ ನಿಟ್ಟಿನಲ್ಲಿ ವಿಶ್ವ ಹೆಜ್ಜೆಯಿಡುತ್ತಿದ್ದು ಹಲವು ಲಸಿಕೆಗಳ ವಿತರಣೆ ಪ್ರಾರಂಭವಾಗಿದೆ.
ಕೊರೋನಾಗೆ ಮೊದಲು ಲಸಿಕೆ ಹುಡುಕಿದ ಹಿರಿಮೆ ರಷ್ಯಾ ದೇಶದಾಗಿದ್ದು ಆಕ್ಟೋಬರ್ 31 ರಂದು ರಷ್ಯಾ ಸ್ಪುಟ್ನಿಕ್ ಅನ್ನುವ ಲಸಿಕೆಯನ್ನು ವಿಶ್ವಕ್ಕೆ ಪರಿಚಯಿಸಿತ್ತು.
ಹಾಗಂತ ಭಾರತ ಕೂಡಾ ಹಿಂದೆ ಬಿದ್ದಿಲ್ಲ, ಈಗಾಗಲೇ ಎರಡು ಲಸಿಕೆಗಳ ವಿತರಣೆಗೆ ಅನುಮತಿ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಲಸಿಕೆಗಳನ್ನು ನಿರೀಕ್ಷಿಸಲಾಗುತ್ತಿದೆ
Discussion about this post