ದೇವರು ಎಂದಿಗೂ ವೆಜ್ ಭಕ್ತ, ನಾನ್ ವೆಜ್ ಭಕ್ತ ಅನ್ನುವ ಭೇದವನ್ನು ಮಾಡಿಲ್ಲ. ಆದರೆ ಮನುಷ್ಯ ಅನ್ನುವ ಪ್ರಾಣಿಗೆ ಮಾತ್ರ ಇಂತಹ ವರ್ಗ ಅದು ಹೇಗೆ ಹೊಳೆಯುತ್ತದೋ ಗೊತ್ತಿಲ್ಲ.
ಗಣೇಶನನ್ನು ಪೂಜಿಸುವ ಬಹುತೇಕ ಮಂದಿ ಸಸ್ಯಹಾರಗಳಿಂದ ಆತನನ್ನು ಸಂತೃಪ್ತಗೊಳಿಸುತ್ತಾರೆ. ಆದರೆ ಕರ್ನಾಟಕ ಒಂದೆರೆಡು ಭಾಗಗಳಲ್ಲಿ ಗಣೇಶನಿಗೆ ನಾನ್ ವೆಜ್ ಬಡಿಸುವ ಕ್ರಮವಿದೆ.
ಆದರೆ ಸಾಯಿಬಾಬ, ರಾಘವೇಂದ್ರ ಗುರುಗಳು ಹೀಗೆ ಗುರು ಪರಂಪರೆಯನ್ನು ಆರಾಧಿಸುವ ಮಂದಿಗೆ ಈ ವೆಜ್, ನಾನ್ ವೆಜ್ ಅನ್ನುವ ಗೊಂದಲ ಸದಾ ಜೀವಂತ. ಗುರುಗಳೇ ಬಂದು ಹೇಳಿದರೂ ಇವರ ಸಂಶಯ ನಿವಾರಣೆಯಾಗುವುದಿಲ್ಲ.
ಹೀಗೆ ಫೇಸ್ ಬುಕ್ ನಲ್ಲಿ ರಾಯರಿಗೆ ಸಂಬಂಧಪಟ್ಟ ಗ್ರೂಪ್ ನಲ್ಲಿ ನಾನ್ ವೆಜ್ ತಿನ್ನುವವರು ರಾಯರ ಆರಾಧನೆಯನ್ನು ಮಾಡಬಹುದೇ…? ಅನ್ನುವ ಪ್ರಶ್ನೆಯನ್ನು ಕೇಳಲಾಗಿತ್ತು. ಬಂದ ಉತ್ತರಗಳನ್ನು ನೋಡಿದರೆ ಗುರುಗಳೇ ಶಾಕ್ ಆಗಬೇಕು. ಕೆಲವರು ನಾನ್ ವೆಜ್ ತಿನ್ನುವುದೇ ತಪ್ಪು ಅನ್ನುವಂತೆ ಮಾತನಾಡಿದರೆ, ಮತ್ತೆ ಕೆಲವರು ಸಮಾಧಾನದ ಉತ್ತರ ಕೊಟ್ಟಿದ್ದಾರೆ.
ಈ ಪ್ರಶ್ನೆ ಸೀರಿಯಸ್ ನೆಸ್ ಅನ್ನು ಪರಿಗಣಿಸಿದ ನಾವು ಕೂಡಾ ಒಂದಿಷ್ಟು ವಿದ್ವಾಂಸರನ್ನು ಮಾತನಾಡಿಸಿದೆವು, ಗುರುಗಳನ್ನು ನಿಷ್ಟೆಯಿಂದ ಪೂಜಿಸುವ ಭಕ್ತರನ್ನು ಮಾತನಾಡಿಸಿದೆವು, ಸಿಕ್ಕ ಉತ್ತರದ ಸಾರಾಂಶ ಇಷ್ಟೆ, ಖಂಡಿತಾವಾಗಿಯೂ ತಿನ್ನಬಹುದು. ಆದರೆ ಬೆಳಗ್ಗೆ ನಾನ್ ವೆಜ್ ತಿಂದು ಪೂಜೆ ಕೋಣೆಗೆ ಹೋಗುವುದು ಸರಿಯಲ್ಲ. ನಾನ್ ವೆಜ್ ಅಂತಲ್ಲ, ತಿಂಡಿ ಮಾಡಿ ಪೂಜೆ ಮಾಡುವುದೇ ತಪ್ಪು. ದೇವರು ಪೂಜೆ ಮಾಡಬೇಡಿ ಹಾಗೇನೂ ಹೇಳಿಲ್ಲ. ಆದರೆ ತಿಂಡಿ ತಿಂದ ಬಳಿಕ ಪೂಜೆಗೆ ಏಕಾಗ್ರತೆ ಸಿಗದಿರಬಹುದು ಅನ್ನುವ ಕಾರಣಕ್ಕೆ ನಮಗೆ ನಾವೇ ಹಾಕಿಕೊಂಡ ಕಟ್ಟುಪಾಡು ಇದು.
ಇನ್ನು ಆಹಾರದ ಕಟ್ಟುಪಾಡುಗಳನ್ನು ಯಾವ ದೇವರು ಕೂಡಾ ವಿಧಿಸಿಲ್ಲ. ದೇವರೇ ಸೃಷ್ಟಿಸಿದ ಜಗತ್ತಿನಲ್ಲಿ ಅವನೇ ಆಹಾರ ಪದ್ದತಿಯನ್ನೂ ಕೂಡಾ ನಿರ್ಧರಿಸಿದ್ದಾನೆ. ಹಾಗಿರುವ ಸಂದರ್ಭದಲ್ಲಿ ವೆಜ್, ನಾನ್ ವೆಜ್ ಅನ್ನುವ ಪ್ರಶ್ನೆ ಬರೋದಿಲ್ಲ. ಬದಲಾಗಿ ನಿರ್ಮಲವಾದ ಭಕ್ತಿಯೊಂದೇ ಮುಖ್ಯ.
ವೈಜ್ಞಾನಿಕವಾದ ಹಿನ್ನಲೆಯಿಂದ ಇದನ್ನು ನೋಡುವುದಾದರೆ ನಿತ್ಯ ನಾನ್ ವೆಜ್ ತಿಂದ್ರೆ ದೇಹಕ್ಕೆ ಒಳ್ಳೆಯದಲ್ಲ. ಹೀಗಾಗಿ ಗುರುವಾರದಂದು ಮಾಂಸಹಾರ ಬಿಡುವುದರಿಂದ ವಾರದಲ್ಲಿ ಒಂದು ದಿನವಾದರೂ ದೇಹಕ್ಕೆ ತರ್ಕಾರಿಯ ಅಂಶಗಳು ಸೇರಿಸಿಕೊಳ್ಳುತ್ತದೆ. ಗುರುಗಳ ಹೆಸರಿನಲ್ಲಿ ನಮ್ಮ ಆರೋಗ್ಯವೂ ವೃದ್ಧಿಸುತ್ತದೆ. ಗುರುವಾರ ಎಂದಲ್ಲ, ನೀವು ಶಿವನನ್ನು ಆರಾಧಿಸುವವರಾದ್ರೆ ಸೋಮವಾರ ಮಾಂಸಹಾರ ತ್ಯಜಿಸಿ, ದೇವಿಯನ್ನು ಆರಾಧಿಸುವುದಾದ್ರೆ ಮಂಗಳವಾರ ಅಥವಾ ಶುಕ್ರವಾರದಂದು ಮಾಂಸಹಾರ ತ್ಯಜಿಸಬೇಕು. ಹೀಗೆ ನಿಮಗಿಷ್ಟವಾದ ದೇವರು, ನಿಮಗಿಷ್ಟವಾದ ವಾರವನ್ನು ಮಾಂಸಹಾರ ವರ್ಜ್ಯವಾನ್ನಗಿಸಬಹುದು.
Discussion about this post