ಇತ್ತೀಚಿಗಷ್ಟೆ ಬಚ್ಚಲು ಮನೆಯಲ್ಲಿ ಕಾಲು ಜಾರಿಬಿದ್ದು ಸೊಂಟ ಮತ್ತು ಕಾಲಿಗೆ ಪೆಟ್ಟು ಮಾಡಿಕೊಂಡಿರುವ ಹಿರಿಯ ನಟಿ ಲೀಲಾವತಿ ಅವರನ್ನು ನಟಿಯರಾದ ಶ್ರುತಿ, ಮಾಳವಿಕಾ ಮತ್ತು ಸುಧಾರಾಣಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಲೀಲಾವತಿಯವರ ನೆಲಮಂಗಳ ನಿವಾಸಕ್ಕೆ ಭೇಟಿ ನೀಡಿದ್ದ ನಟಿಯರು ಲೀಲಾವತಿ ಅವರ ಮನೆಯಲ್ಲಿ ಬಹು ಸಮಯ ಕಾಲ ಕಳೆದು ಅವರ ಜೊತೆ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಶೃತಿಯವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಅವರು ನೆಮ್ಮದಿಯಾಗಿದ್ದಾರೆ ಬದುಕಲು ಬಿಡಿ ಎಂದು ವಿನಂತಿ ಮಾಡಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ಹಾಗೂ ಅತ್ಯಂತ ಸುಂದರಿ ಲೀಲಾವತಿ ಅಮ್ಮ ಅವರು ನಟಿಸಿರುವ ಚಿತ್ರಗಳ ಸಂಖ್ಯೆ ಗೊತ್ತೇನು 650 ಕ್ಕಿಂತಲೂ ಹೆಚ್ಚು!!. ಎರಡು ಬಾರಿ ರಾಷ್ಟ್ರಪ್ರಶಸ್ತಿ 5ಕ್ಕೂ ಹೆಚ್ಚು ಬಾರಿ ರಾಜ್ಯ ಪ್ರಶಸ್ತಿ ಭಾರತದ ಬಹುತೇಕ ಭಾಷೆಗಳಲ್ಲಿ ನಟನೆ ಎಲ್ಲದಕ್ಕಿಂತಲೂ ಮುಖ್ಯವಾಗಿ ಚಲವಾದಿ ,ಆತ್ಮಗೌರವಕ್ಕೆ ಕೊಡುವ ಪ್ರಾಮುಖ್ಯತೆ ,ತ್ಯಾಗಮಯಿ ,ಸ್ಪುರದ್ರೂಪಿ ,ಮಾದರಿಯ ತಾಯಿ ,ಕರುಣಾಮಯಿ,ಅದ್ಭುತವಾದ ಹಾಸ್ಯಪ್ರಜ್ಞೆ, ಇಂದಿಗೂ ಎಲ್ಲರನ್ನೂ ಹುರಿದುಂಬಿಸುವ ಜೀವನೋತ್ಸಾಹ, ಇತ್ತೀಚಿನ ದಿನಗಳಲ್ಲಿ ರೈತ ಮಹಿಳೆ, ಇದೆಲ್ಲಕ್ಕೂ ಒಂದೇ ಹೆಸರು
“ಡಾಕ್ಟರ್ ಲೀಲಾವತಿ ಅಮ್ಮ “. ಅವರನ್ನು ನೋಡಬೇಕೆನ್ನುವುದು ನಮ್ಮ ಮೂವರ ಬಹುದಿನದ ಆಸೆಯಾಗಿತ್ತು, ಇತ್ತೀಚಿಗೆ ಜಾರಿ ಬಿದ್ದು ಅಮ್ಮ ಪೆಟ್ಟು ಮಾಡಿಕೊಂಡಿದ್ದಾರೆ ಎಂದು ತಿಳಿದು ಕೂಡಲೇ ನಾವು ಮೂವರು ಹೋಗಿ ಭೇಟಿ ಆದೆವು…. ದೇವರ ದಯೆ ಅಮ್ಮ ಆರೋಗ್ಯವಾಗಿದ್ದಾರೆ ನಮ್ಮೆಲ್ಲರೊಂದಿಗೆ ಗಂಟೆಗಟ್ಟಲೆ ಹರಟುತ್ತಾ ಹಾಡುತ್ತಾ ನಮ್ಮೊಂದಿಗೆ ಹೆಜ್ಜೆ ಹಾಕಿದ್ದು ನೋಡಿ ಕಣ್ತುಂಬಿ ಬಂತು ಹೃದಯ ತುಂಬಿ ಬಂತು, ನಮಗಂತೂ ತವರುಮನೆಗೆ ಹೋದಷ್ಟೇ ಖುಷಿ ಪಟ್ಟೆವು. ಅಮ್ಮ ಹೀಗೆ ನಗು ನಗುತ್ತಾ ಆರೋಗ್ಯವಾಗಿ ನೂರಾರು ಕಾಲ ಬಾಳಲಿ ಎಂಬುದೇ ನಮ್ಮ ಹಾರೈಕೆ 🙏🥰 ಬಹುಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಹಾಗೂ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುಳ್ಳು ಅವಹೇಳನಕಾರಿ ವರದಿಗಳನ್ನು ನೋಡಿ ತುಂಬಾ ನೋವುಂಟು ಮಾಡಿತ್ತು. ಅದನ್ನು ಖಂಡಿಸುತ್ತೇನೆ…. ಅಮ್ಮ ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ನೆಮ್ಮದಿಯಾಗಿದ್ದಾರೆ ಇರಲು ಬಿಡಿ.
ಇನ್ನು ಸುಧಾರಾಣಿಯವರು, ಲೀಲಾವತಿ ಅಮ್ಮ, ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ ಇವರು. ನೂರಾರು ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಾರೆ. ಲೀಲಾವತಿ ಎನ್ನುವುದು ದುರ್ಗಾದೇವಿಯ ಮತ್ತೊಂದು ಹೆಸರು, ಕನ್ನಡದಲ್ಲಿ ಲೀಲಾ ಎನ್ನುವ ಪದಕ್ಕೆ ಮತ್ತೊಂದು ಅರ್ಥ ವಿನೋದ. ಲೀಲಾವತಿ ಅಮ್ಮ ದುರ್ಗೆಯ ಅವತಾರವಾದರು, ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇಂದು ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾರೆ. ಅವರು ವಾಸವಿರುವ ಊರಿನಲ್ಲಿ ಬಡಜನರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ, ಹಸು ಕರುಗಳಿಗೆ ನೀರಿನ ಟ್ಯಾಂಕ್ ಕಟ್ಟಿಸಿ ಅವುಗಳಿಗೆ ಮೇವು ನೀಡಿದ್ದಾರೆ, ಎಷ್ಟೋ ಜನರಿಗೆ ಊಟ ನೀಡಿ ಸಹಾಯ ಮಾಡುತ್ತಾ ಇರುವ ಇವರನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎಂದು ಕರೆಯುವುದೋ ಅಥವಾ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನು ಭೂಮಿ ತಾಯಿಯ ಹಾಗೆ ತನ್ನಲ್ಲಿಯೇ ಹೊತ್ತು, ತಾಳ್ಮೆಯಿಂದ ಎಲ್ಲವನ್ನು ಸಹಿಸಿ, ಲೀಲಾಜಾಲವಾಗಿ ನಿಭಾಯಿಸಿರವ ಇವರನ್ನು ಭೂಮಿ ತಾಯಿಯ ಸ್ವರೂಪ ಎಂದು ಕರೆಯುವುದೋ..
ಇಂತಹ ವ್ಯಕ್ತಿತ್ವ ಹೊಂದಿರುವ ಲೀಲಾವತಿ ಅಮ್ಮನವರ ಜೊತೆ ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು, ನಾಯಕಿಯಾದ ಮೇಲು ಲೀಲಾವತಿ ಅಮ್ಮನವರ ಜೊತೆ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ.
ಇಲ್ಲಿರುವ ಎರಡು ಫೋಟೋಗಳಲ್ಲಿ ಮೊದಲನೆಯದು ನಾನು ಬಾಲನಟಿಯಾಗಿ ನಟಿಸಿದ ಮೊದಲ ಸಿನಿಮಾ “ಕಿಲಾಡಿ ಕಿಟ್ಟು” ಚಿತ್ರೀಕರಣದ ಸಮಯದ ಫೋಟೋ ಮತ್ತೊಂದು ಇಂದು ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ.. ವರ್ಷಗಳು ಉರುಳಿವೆ ಹೊರತು ನಮ್ಮ ನಡುವೆ ಇರುವ ಬಾಂಧವ್ಯವಲ್ಲ.. ಎಂದು ಬರೆದುಕೊಂಡಿದ್ದಾರೆ.
Discussion about this post