ತಮಿಳುನಾಡು : ಸ್ವಯಂ ಘೋಷಿತ ಆಧ್ಯಾತ ಗುರು ಜಗ್ಗಿ ವಾಸುದೇವ್ ಹಾಗೂ ತಮಿಳುನಾಡಿನ ನೂತನ ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ನಡುವೆ ಟ್ವಿಟರ್ ವಾರ್ ಪ್ರಾರಂಭಗೊಂಡಿದೆ. ದೇವಸ್ಥಾನಗಳನ್ನು ಸರ್ಕಾರದಿಂದ ಮುಕ್ತಗೊಳಿಸುವ ವಿಚಾರದಲ್ಲಿ ಇಬ್ಬರೂ ಕಿತ್ತಾಟ ಶುರುವಿಟ್ಟುಕೊಂಡಿದ್ದಾರೆ.
ಸರ್ಕಾರದ ವಶದಲ್ಲಿರುವ ದೇವಸ್ಥಾನಗಳನ್ನು ಮುಕ್ತಗೊಳಿಸಿ ಅನ್ನುವ ಹೋರಾಟವನ್ನು ಜಗ್ಗಿ ವಾಸುದೇವ್ ಹಲವು ತಿಂಗಳುಗಳಿಂದ ಅಭಿಯಾನ ನಡೆಸುತ್ತಿದ್ದಾರೆ. ಇದನ್ನು ತ್ಯಾಗರಾಜನ್ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ.
ಈ ಬಗ್ಗೆ ಮಾರ್ಚ್ ತಿಂಗಳಿನಲ್ಲಿ ಮಾತನಾಡಿದ್ದ ತ್ಯಾಗರಾಜನ್, ತಮಿಳುನಾಡು ದೇವಸ್ಥಾನಗಳಿಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು. ಇನ್ನು ಕಳೆದ ವಾರ ಈ ಬಗ್ಗೆ ಮಾತನಾಡಿದ್ದ ತ್ಯಾಗರಾಜನ್, ಜಗ್ಗಿ ವಾಸುದೇವನ್ ಗೆ ಪ್ರಚಾರದ ಹುಚ್ಚು ಹಿಡಿದಿದೆ ಅಂದಿದ್ದರು. ಜೊತೆಗೆ ದೇವಸ್ಥಾನಗಳು ಸರ್ಕಾರ ಸುಪರ್ದಿಯಲ್ಲೇ ಇರಬೇಕು ಎಂದು ಪ್ರತಿಪಾದಿಸಿದ್ದ ಅವರು ಹೆಚ್ಚಿನ ಗಣ ಗಳಿಸಲು ಹೊಸ ಮಾರ್ಗದ ಹುಡುಕಾಟದಲ್ಲಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಇದೀಗ ಆಧ್ಯಾತ್ಮ ಗುರುವಿನ ಬೆಂಬಲಕ್ಕೆ ಬಿಜೆಪಿ ಧಾವಿಸಿದ್ದು, ತ್ಯಾಗರಾಜನ್ ಮಾತುಗಳನ್ನು ಖಂಡಿಸಿದೆ. ಜೊತೆಗೆ ಇಶಾ ಫೌಂಡೇಷನ್ ಕೂಡಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ತ್ಯಾಗರಾಜನ್ ಹೇಳಿಕೆಯಿಂದ ಇಶಾ ಸೇವಕರ ಮನಸ್ಸಿಗೆ ನೋವಾಗಿದೆ. ಅವರ ಭಾವನೆಗಳಿಗೆ ಧಕ್ಕೆಯಾಗಿದೆ. ಇದೊಂದು ದುರದೃಷ್ಟಕರ ಹೇಳಿಕೆ ಅಂದಿದೆ.
Discussion about this post