ಇಂದು ಮುಂಜಾನೆಯಿಂದ ಫೇಸ್ ಬುಕ್ ನಲ್ಲಿ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಮ್ಮ ಫೇಸ್ ಬುಕ್ ಪೇಜ್ ನಲ್ಲೂ ಬೆಳ್ಳಂದೂರು ಎಕೋ ಸ್ಪೇಸ್ ಬಳಿ ವೆಂಕಟೇಶ್ವರ ದೇವಾಲಯದಲ್ಲಿ ನಡೆದ ಕನ್ನಡಕ್ಕಾಗಿ ಹೋರಾಟದ ವಿಡಿಯೋ ಹಾಕಿದ್ದೇವೆ. ಆದರೆ ವಿಷಯವನ್ನು ಹೀಗೆ ಬಿಡುವುದು ಸರಿಯಲ್ಲ, ಅಬ್ಬರಿಸುವ ಬದಲು ವಿಷಯ ಏನು ಎಂದು ತಿಳಿದುಕೊಳ್ಳೋಣ ಎಂದು ನಾವು ಹೊರಟಾಗ ಮತ್ತೊಂದು ಕಥೆ ಅನಾವರಣಗೊಂಡಿದೆ.
ಬೆಳ್ಳಂದೂರು ಎಕೋ ಸ್ಪೇಸ್ ಬಳಿ ವೆಂಕಟೇಶ್ವರ ದೇವಾಲಯಕ್ಕೆ ಹೋದ ಕರುನಾಡ ಸೇವಕರು ತಂಡದ ಕನ್ನಡತಿ ಅನು ಅನ್ನುವವರು ತೆಲುಗು ಪೂಜೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆದರೆ ಅಲ್ಲೇ ಇದ್ದ ಕನ್ನಡಿಗರು ಜಾಗೃತಿಯಾಗಿರಲಿಲ್ಲ. ಬದಲಾಗಿ ಕನ್ನಡತಿ ಮೇಲೆ ತಿರುಗಿ ಬಿದ್ದಿದ್ದರು. ಜೊತೆಗೆ ದೇವಸ್ಥಾನದ ಮಂದಿ ಕೂಡಾ ರಂಪಾಟ ಮಾಡಿದ್ದರು. ಇದು ಖಾಸಗಿ ದೇವಸ್ಥಾನ ಅನ್ನುವ ಸಮಜಾಯಿಷಿ ಬೇರೆ ಕೊಟ್ಟಿದ್ದರು.
ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿಯನ್ನು ನಾವು ಸಂಪರ್ಕಿಸಿದಾಗ ಅವರು ಮೊದಲು ಹುಡುಗಿಯೇ ಮೇಲೆ ದೂರುಗಳ ಸುರಿಮಳೆಗೈದರು. ದೇವಸ್ಥಾನ ಮುಚ್ಚುವ ಸಮಯವಾಗಿತ್ತು. ಹೀಗಾಗಿ ಅವರು ರಂಪಾಟ ಮಾಡಿದರು ಎಂದರು. ಅವೆಲ್ಲಾ ಬೇರೆ ಕಥೆ. ವಿಡಿಯೋದಲ್ಲಿ ಕನ್ನಡಕ್ಕಾಗಿ ಆಕೆ ದನಿ ಎತ್ತಿದ್ದಾರೆ ಅದರ ಬಗ್ಗೆ ಪ್ರತಿಕ್ರಿಯಿಸಿ ಎಂದಾಗ ನಮ್ಮೊಂದಿಗೆ ಮಾತನಾಡಿದ ಪುರುಷೋತ್ತಮ್ ಅನ್ನುವವರು ( ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ)
“ ಸರ್ ನಮಗೂ ಕನ್ನಡದ ಬಗ್ಗೆ ಪ್ರೀತಿಯಿದೆ, ನಾವು ಕನ್ನಡಿಗರೇ..ಆದರೆ ನಮಗೆ ಕನ್ನಡ ಬರುವು ಆಗಮ ಶಾಸ್ತ್ರ ಪಾಂಡಿತ್ಯ ಪಡೆದ ಅರ್ಚಕರು ಸಿಗುತ್ತಿಲ್ಲ. ಈ ಹಿಂದೆ ಕನ್ನಡದ ಅರ್ಚಕರು ನಮ್ಮಲ್ಲಿದ್ದರು. ಆದರೆ ಅವರು ಬೇರೆ ಕಡೆ ಹೋದರು. ಬಳಿಕ ಕನ್ನಡ ಅರ್ಚಕರಿಗಾಗಿ ನೂರಾರು ದೇವಸ್ಥಾನ ಸುತ್ತಿದ್ದೇನೆ. ಹತ್ತಾರು ಮಂದಿಗೆ ಮನವಿ ಮಾಡಿದ್ದೇನೆ. ಆದರೆ ಯಾರೊಬ್ಬರೂ ಬರಲು ಸಿದ್ದರಿಲ್ಲ. ಸಿದ್ದರಿಲ್ಲ ಅನ್ನುವುದಕ್ಕಿಂತ ಅರ್ಚಕರೇ ಸಿಕ್ಕಿಲ್ಲ ನನಗೆ”
ಅರ್ಚಕರು ಸಿಕ್ಕಿಲ್ಲ ಎಂದು ದೇವಸ್ಥಾನಕ್ಕೆ ಬಾಗಿಲು ಹಾಕುವುದು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ತೆಲುಗು, ತಮಿಳು ಅರ್ಚಕರನ್ನು ನೇಮಿಸಿಕೊಳ್ಳುವ ಅನಿವಾರ್ಯತೆ ನಮಗಿದೆ. ಯಾರಾದರೂ ಕನ್ನಡ ಬರೋ, ಅಗಮಶಾಸ್ತ್ರದಲ್ಲಿ ಪಾಂಡಿತ್ಯ ಪಡೆದ ಅರ್ಚಕರಿದ್ದಾರೆ ತಿಳಿಸಿ. 15 ಸಾವಿರ ಸಂಬಳ, ಉಳಿದುಕೊಳ್ಳಲು ವ್ಯವಸ್ಥೆ, ತಟ್ಟೆ ಹಣದಲ್ಲಿ ಕಮಿಷನ್, ವಿಶೇಷ ಪೂಜೆ, ಅಭಿಷೇಕ,ಹೋಮ ಹವನಗಳು ಬುಕ್ಕಿಂಗ್ ಆದರೆ ಅದರಲ್ಲಿ ಒಂದಿಷ್ಟು ದುಡ್ಡು ಅರ್ಚಕರಿಗೆ ಸೇರುತ್ತದೆ.
ಹೀಗಾಗಿ ನಿಮಗೆ ಗೊತ್ತಿದ್ದರೆ ಕನ್ನಡ ಅರ್ಚಕರನ್ನು ನಮಗೆ ರೆಫರ್ ಮಾಡಿ ಎಂದು ಅವರು ತಮ್ಮ ನಂಬರ್ ಅನ್ನು ಕೂಡಾ ಕೊಟ್ಟಿದ್ದಾರೆ. ಅವರ ಸಂಖ್ಯೆ 8884133226.
ನಿಮಗೇನಾದರೂ ಸೂಕ್ತ ಕನ್ನಡ ಅರ್ಚಕರು ಸಿಕ್ಕರೆ ದಯವಿಟ್ಟು ತಿಳಿಸಿ.
ಹಾಗಂತ ಯುವತಿಯ ಜೊತೆಗೆ ದೇವಸ್ಥಾನದ ಮಂದಿ ವರ್ತಿಸಿದ ರೀತಿ ಸರಿ ಇಲ್ಲ. ಅದಕ್ಕೆ ಅವರು ಕ್ಷಮೆ ಕೇಳಲೇಬೇಕು. ಕನಿಷ್ಠ ಪಕ್ಷ ನಮ್ಮಲ್ಲಿ ಹೇಳಿದ ಸಮಸ್ಯೆಯನ್ನು ಇದೇ ಕನ್ನಡ ಹೋರಾಟಗಾರ್ತಿಗೆ ಮನವರಿಕೆ ಮಾಡಬಹುದಿತ್ತು. ಅದನ್ನು ಮಾಡದೆ ಹಾರಾಡಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅನು ನೇತ್ರಾ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ.
Discussion about this post