ಮುಂಬೈ : ಅದು ಜುಲೈ 13, 2002 ನ್ಯಾಟ್ ವೆಸ್ಟ್ ಸರಣಿಯ ಫೈನಲ್ ಪಂದ್ಯ. ಸೌರವ್ ಗಂಗೂಲಿ ನಾಯಕತ್ವದ ಟೀಂ ಇಂಡಿಯಾದಲ್ಲಿ ಬಲಿಷ್ಟ ಆಟಗಾರರಿದ್ದರು. ಗಂಗೂಲಿ, ಸಚಿನ್, ಸೆಹವಾಗ್, ದ್ರಾವಿಡ್ ಸೇರಿದಂತೆ ಘಟಾನುಘಟಿ ಆಟಗಾರರು ಗಂಗೂಲಿ ಬಳಗದಲ್ಲಿದ್ದರು. ಈ ವೇಳೆ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ನಡೆಸಿ ಟೀಂ ಇಂಡಿಯಾಕ್ಕೆ ಬರೋಬ್ಬರಿ 325 ರನ್ ಗಳ ಟಾರ್ಗೇಟ್ ನೀಡಿತ್ತು.
ಈ ವೇಳೆ ಇಂಗ್ಲೆಂಡ್ ವಿರುದ್ದ ಬರೋಬ್ಬರಿ 325ರನ್ ಗಳ ಬೆನ್ನು ಹತ್ತಿದ್ದ ಟೀಂ ಇಂಡಿಯಾ ಕೊನೆಗೂ ಟ್ರೋಫಿ ಗೆದ್ದು ಬೀಗಿತ್ತು. ಆ ವೇಳೆ ಗೆಲುವಿಗಿಂತಲೂ ಸುದ್ದಿಯಾಗಿದ್ದು, ಗಂಗೂಲಿಯವರ ಸಂಭ್ರಮಾಚರಣೆ.
ಆರಂಭಿಕರಾದ ನಾಯಕ ಸೌರವ್ ಗಂಗೂಲಿ 43 ಎಸೆತಗಳಲ್ಲಿ 60 ರನ್ ಗಳಿಸಿದ್ರೆ ವೀರೇಂದ್ರ ಸೆಹ್ವಾಗ್ 45ರನ್ ನೆರವಿನೊಂದಿಗೆ 106 ರನ್ ಜೊತೆಯಾಟ ನೀಡಿದ್ರು. ಆದರೆ ದಿನೇಶ್ ಮೋಂಗಿಯಾ, ಸಚಿನ್ ತೆಂಡೂಲ್ಕರ್ ಹಾಗೂ, ರಾಹುಲ್ ದ್ರಾವಿಡ್ ಈ ಪಂದ್ಯದಲ್ಲಿ ನಿರೀಕ್ಷಿತ ಸಾಧನೆ ತೋರಿರಲಿಲ್ಲ.
ಒಂದು ಹಂತದಲ್ಲಿ ಟೀಂ ಇಂಡಿಯಾ 146 ರನ್ ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ದಡದತ್ತ ಮುಖ ಮಾಡಿತ್ತು. ಆಗ ಎಂಟ್ರಿ ಕೊಟ್ಟವರು ಮೊಹಮದ್ ಕೈಫ್ ಹಾಗೂ ಯುವರಾಜ್ ಸಿಂಗ್. ಇವರಿಬ್ಬರ ಭರ್ಜರಿ ಆಟದ ನೆರವಿನಿಂದ ಭಾರತ ಗೆಲುವಿನ ದಡ ಸೇರಿತ್ತು.
ಪಂದ್ಯದ ಫಲಿತಾಂಶದ ಬಗ್ಗೆ ಆತಂಕಿತರಾಗಿ ಕೂತಿದ್ದ ಗಂಗೂಲಿ ಟೀಂ ಇಂಡಿಯಾ ಗೆಲುವು ಕಂಡ ಬೆನ್ನಲ್ಲೇ ತಮ್ಮ ಶರ್ಟ್ ಬಿಚ್ಚಿ ಸಂಭ್ರಮಾಚರಣೆಯನ್ನು ಮಾಡಿದ್ರು. ಮಾತ್ರವಲ್ಲ ಪೂರ್ತಿ ಮೈದಾನ ಓಡಾಡಿದ್ರು.
ಈ ಸಂಭ್ರಮಕ್ಕೂ ಕಾರಣವಿದೆ, ಇದಕ್ಕೂ ಮುಂಚೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯವೊಂದರಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅಂಗಿಯನ್ನು ಬಿಚ್ಚಿ ಸಂಭ್ರಮಿಸಿದ್ರು. ಇದರ ಸೇಡು ತೀರಿಸಲು ಗಂಗೂಲಿ ಕಾಯುತ್ತಿದ್ರು, ಅದಕ್ಕೆ ಲಾರ್ಡ್ಸ್ ಮೈದಾನದಲ್ಲಿ ಅವಕಾಶ ಸಿಕ್ಕಿತ್ತು.
Discussion about this post