ಮಂಗಳೂರು : ಅದೇನೂ ಕಾಲ ಬಂತೋ ಗೊತ್ತಿಲ್ಲ. ಕಳೆದ ಕೆಲವು ದಿನಗಳಿಂದ ಹಾವು ಹಿಡಿಯುವವರ ಪಾಲಿಗೆ ಹಾವುಗಳೇ ಸಾವು ತಂದೊಡ್ಡುತ್ತಿದೆ.
ಶನಿವಾರ ಉಪ್ಪಿನಂಗಡಿ ಸ್ನೇಕ್ ಮುಸ್ತಾಫ ಅವರು ಹಾವು ಹಿಡಿಯೋ ಸಂದರ್ಭದಲ್ಲೇ ಹಾವು ಕಡಿತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಶನಿವಾರ ಸಂಜೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂದಿರುವ ಸುದ್ದಿ ಮುಸ್ತಾಫ ಅವರಿಗೆ ಬಂದಿದೆ. ಹೀಗಾಗಿ ಮನೆಯವರ ಮನವಿಯಂತೆ ಹಾವನ್ನು ರಕ್ಷಿಸಲು ಅಲ್ಲಿಗೆ ತೆರಳಿದ್ದಾರೆ.
ಅದೇನಾಯ್ತೋ ಗೊತ್ತಿಲ್ಲ ಸಾವಿರಾರು ಹಾವುಗಳನ್ನು ಹಿಡಿದು ಅನುಭವವುಳ್ಳ ಮುಸ್ತಾಫ ಅವರಿಗೆ ನಾಗರಹಾವು ಕಚ್ಚಿದೆ.ತೀವ್ರವಾಗಿ ಅಸ್ವಸ್ಥಗೊಂಡ ಇವರನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಮೃತರು ಪತ್ನಿ ಹಾಗೂ ನಾಲ್ಕು ಹಾಗೂ ಎರಡು ವರ್ಷದ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಉಪ್ಪಿನಂಗಡಿಯ ನೆಕ್ಕಿಲಾಡಿ ನಿವಾಸಿ ಎಂ.ಆರ್. ಮೊಹಮ್ಮದ್ ಮುಸ್ತಾಫ ‘ಸ್ನೇಕ್ ಮುಸ್ತಾಫ’ ಎಂದೇ ಹೆಸರಾಗಿದ್ದರು.
ನೆಕ್ಕಿಲಾಡಿ ಬೊಳಂತಿಲದ ಹೊಸ ಕಾಲೋನಿಯಲ್ಲಿ ಮನೆ ಮಾಡಿದ್ದ ಮುಸ್ತಾಫ ವೃತ್ತಿಯಲ್ಲಿ ಅಟೋ ರಿಕ್ಷಾ ಚಾಲಕರಾಗಿದ್ದರು. ಜೊತೆಗೆ ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡೋ ಮೂಲಕ ಸಮಾಜ ಸೇವೆಯ ಕಾರ್ಯವನ್ನು ಮಾಡುತ್ತಿದ್ದರು.
Discussion about this post