ಬೆಂಗಳೂರು : ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೋನಾ ಅಬ್ಬರ ತೀವ್ರಗೊಂಡಿದೆ.
ಕೇರಳ ಮಹಾರಾಷ್ಟ್ರಗಳಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ, ಕರ್ನಾಟಕದಲ್ಲೂ ಅಪಾಯ ಗ್ಯಾರಂಟಿ ಅನ್ನುವುದು ಸಾಬೀತಾಗಿದೆ.
ಹೀಗಾಗಿಯೇ ಕರ್ನಾಟಕದಲ್ಲಿ ಕೊರೋನಾ ಅಬ್ಬರ ಹೆಚ್ಚಾಗದಂತೆ ತಡೆಯುವ ನಿಟ್ಟಿನಲ್ಲಿ ಮತ್ತಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿದೆ.
ಬೆಂಗಳೂರಿನಲ್ಲಿ ಮದುವೆ ಮನೆಗಳಿಗೆ ಮಾರ್ಷಲ್ ಗಳು ಭೇಟಿ ನೀಡುವ ಮೂಲಕ ಮಾಸ್ಕ್, ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲಾಗುತ್ತಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕಿಲ್ಲ ಅಂದ್ರೆ ದಂಡ ವಿಧಿಸಲಾಗುತ್ತಿದೆ. ಮಾರ್ಷಲ್ ಗಳು ಮಾಸ್ಕ್ ಧರಿಸದವರನ್ನು ಅಡ್ಡ ಹಾಕುವ ಪರಿ ನೋಡಿದರೆ ಅದ್ಯಾವ ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆ ನಡೆಯುತ್ತಿದೆಯೇ ಅನ್ನುವ ಅನುಮಾನ ಬರುತ್ತಿದೆ.
ಇದೀಗ ಮದುವೆ ಚೌಟ್ರಿಗಳಿಗೆ ಮಾರ್ಷಲ್ ಗಳು ಭೇಟಿ ಕೊಡಲಾರಂಭಿಸಿದ್ದಾರೆ. ಮದುವೆ ಮನೆಯಲ್ಲಿ ಸಿಕ್ಕಾಪಟ್ಟೆ ಜನ ಸೇರುತ್ತಾರೆ. ಯಾರೊಬ್ಬರೂ ಮಾಸ್ಕ್ ಹಾಕೋದಿಲ್ಲ, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ ಆ ಕಾರಣಕ್ಕಾಗಿ ಮಾರ್ಷಲ್ ಗಳು ಭೇಟಿ ಕೊಡ್ತಾರಂತೆ.
ಮೊನ್ನೆ ಮೊನ್ನೆ ಯಡಿಯೂರಪ್ಪ ಮೊಮ್ಮಗಳ ಕಾರ್ಯಕ್ರಮವೊಂದು ನಡೆಯಿತು. ಅದ್ಯಾವ ಮಾರ್ಷಲ್ ಗಳು ಅಲ್ಲಿ ಕಾಣ ಸಿಗಲಿಲ್ಲ. ಕುಮಾರ್ ಬಂಗಾರಪ್ಪ ಪುತ್ರಿಯ ನಿಶ್ಚಿತಾರ್ಥ ನಡೆಯಿತು. ಇನ್ಸ್ಟಾದಲ್ಲಿರುವ ಫೋಟೋಗಳನ್ನು ನೋಡಿದರೆ ಅಲ್ಲಿ ಯಾರೊಬ್ಬರೂ ಮಾಸ್ಕ್ ಹಾಕಿರಲಿಲ್ಲ.
ಇನ್ನು ನಿತ್ಯ ಹತ್ತಾರು ರಾಜಕೀಯ ಕಾರ್ಯಕ್ರಮಗಳು ನಡೆಯುತ್ತಿದೆ. ಸಾಮಾಜಿಕ ಅಂತರ ಅಂದ್ರೆ ಏನು, ಮಾಸ್ಕ್ ಎಲ್ಲಿದೆ ಎಂದು ಹುಡುಕಬೇಕು.
ರಾಜಕಾರಣಿಗಳು ನ್ಯೂಸ್ ಚಾನೆಲ್ ಗಳ ಲೋಗೋ ಗೆ ಮಾತನಾಡಬೇಕಾದ್ರೆ ಅವರು ಸುತ್ತ ನೂರಾರು ಜನ ತುಂಬಿರುತ್ತಾರೆ. ಅಲ್ಲಿ ಮಾಸ್ಕ್ ಹಾಕಿದವರು ಇದ್ರೆ ಹೇಳಿ
ಬಡಪಾಯಿಗಳು ಸಿಕ್ರೆ ದಂಡ ಹಾಕೋ ಮಾರ್ಷಲ್ ಗಳನ್ನು ಇಂಥ ಜಾಗಗಳಿಗೆ ಕಳುಹಿಸುವ ತಾಕತ್ತು ಆರೋಗ್ಯ ಇಲಾಖೆ ಅಥವಾ ಬಿಬಿಎಂಪಿಗೆ ಇದ್ರೆ ಹೇಳಿ.
ಹೋಗ್ಲಿ ಅದೆಷ್ಟು ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಪಾಡಲಾಗುತ್ತದೆ. ಶೇ100ರಷ್ಟು ಚಿತ್ರಮಂದಿರದ ಸೀಟ್ ಫಿಲ್ ಮಾಡಬಹುದು ಅಂದ ಮೇಲೆ ಮದುವೆ ಮನೆಗಳ ಮೇಲೆ ಅದ್ಯಾಕೆ ಆರೋಗ್ಯ ಇಲಾಖೆಗೆ ಕೋಪ.
ಅಲ್ಲಿಗೆ ದಂಡ ಅನ್ನುವ ಮಧ್ಯಮವರ್ಗದ ಮಂದಿಗೆ ಮಾತ್ರ ಸೀಮಿತ, ಕೊರೋನಾ ನಿಯಮಾವಳಿಗಳನ್ನು ರಾಜಕಾರಣಿಗಳು, ಸೆಲೆಬ್ರೆಟಿಗಳು ಪಾಲಿಸದಿದ್ದರೂ ಪರವಾಗಿಲ್ಲ ಅಂದಾಯ್ತು.
ಒಟ್ಟಿನಲ್ಲಿ ಬಡವರು ಅದೇನು ಪಾಪ ಮಾಡಿದ್ದಾರೋ ಅನ್ನುವುದೇ ಗೊತ್ತಿಲ್ಲ.
Discussion about this post