ಬಾಳಾಸಾಹೇಬರ ಪ್ರೀತಿಯ ಶಿಷ್ಯ ಏಕನಾಥ ಶಿಂಧೆ ಹಿಂದೆ ಆಟೋ ಡ್ರೈವರ್ ಆಗಿದ್ದರು
ಮುಂಬೈ : ಕಳೆದ 10 ದಿನಗಳಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆ ಸಂಭವಿಸುತ್ತಿತ್ತು. ಸರ್ಕಾರ ಉಳಿಸಿಕೊಳ್ಳಲು ಉದ್ಧವ್ ಠಾಕ್ರೆ ನಡೆಸಿದ ಸರ್ಕಸ್ ಕೊನೆಗೂ ಫಲ ನೀಡಲಿಲ್ಲ. ಮಾತ್ರವಲ್ಲದೆ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಕೂಡಾ ದೊಡ್ಡ ಮಟ್ಟದ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸುವಲ್ಲಿ ಏಕನಾಥ ಶಿಂಧೆ ಯಶಸ್ವಿಯಾಗಿದ್ದಾರೆ. ಏಕಾಂಗಿ ಬಂಡಾಯ ಬಾವುಟ ಹಾರಿಸಿದ ಶಿಂಧೆ ತನ್ನ ಪಡೆಯನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾದರು.
ಈ ನಡುವೆ ಶಿಂಧೆಯವರ ಬಂಡಾಯ ಸಹಿಸಿಕೊಳ್ಳಲಾಗದ ಉದ್ಧವ್ ಠಾಕ್ರೆ ಬಳಗದ ಸದಸ್ಯರು, ಆಟೋ ಡ್ರೈವರ್ ಒಬ್ಬನನ್ನು ಶಾಸಕನನ್ನಾಗಿ ಮಾಡಿದ್ದು ಶಿವಸೇನೆ ಅನ್ನುವುದು ನೆನಪಿರಲಿ ಅಂದಿದ್ದರು.

ಹೌದು ಇಂದು ಮಹಾರಾಷ್ಟ್ರದ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿರುವ ಏಕನಾಥ ಶಿಂಧೆ , ಈ ಹಿಂದೆ ಆಟೋ ಚಾಲಕರಾಗಿದ್ದರು. ಮಹಾರಾಷ್ಟ್ರದ ಸತಾರಾ ನಿವಾಸಿಯಾಗಿದ್ದ ಏಕನಾಥ ಶಿಂಧೆ, ವಿದ್ಯಾರ್ಥಿಯಾಗಿದ್ದ ವೇಳೆಯೇ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದರು. ಆ ವೇಳೆಯೇ ಬಾಳಾಸಾಹೇಬ್ ಠಾಕ್ರೆಯವರ ಹಿಂದುತ್ವಕ್ಕೆ ಮನ ಸೋತಿದ್ದರು. ರಾಜಕೀಯವಾಗಿ ಬೆಳೆಯಬೇಕು ಅನ್ನುವ ಕಾರಣಕ್ಕೆ ಸತಾರಾ ತೊರೆದ ಶಿಂಧೆ, ಥಾಣೆಗೆ ಬಂದು ನೆಲೆಸಿದರು. ಥಾಣೆ ಆ ಕಾಲದಲ್ಲೇ ಶಿವಸೇನೆಯ ಪ್ರಮುಖ ನೆಲೆಯಾಗಿತ್ತು.

ಇಲ್ಲಿ ಬಹಳ ಕಾಲ ಕಾರು ಓಡಿಸುತ್ತಿದ್ದ ಶಿಂಧೆ, ಶಿವಸೇನೆಯ ಕಾರ್ಯಕರ್ತರಾಗಿ ದುಡಿಯುತ್ತಿದ್ದರು. ಪಕ್ಷದ ಕಾರ್ಯಕರ್ತಪರ ಸಂಘ ಕಟ್ಟಿದ್ದ ಶಿಂಧೆ, 1980ರಲ್ಲಿ ಥಾಣಾ ಶಾಖೆಯ ಮುಖ್ಯಸ್ಥರಾಗಿದ್ದರು. ಈ ವೇಳೆ ಬಾಳಾ ಸಾಹೇಬ್ ಕಣ್ಣಿಗೆ ಬಿದ್ದ ಏಕನಾಥ್ ಶಿಂಧೆ, ಥಾಣೆ ಮುನ್ಸಿಪಲ್ ಕಾರ್ಪೋರೇಟರ್ ಆಗಿ ಆಯ್ಕೆಯಾದರು. ಇಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದ ಅವರು ರಾಜಕೀಯವಾಗಿ ಮೇಲೆರಿದರು. 2004ರಲ್ಲಿ ಮೊದಲ ಬಾರಿಗೆ ಶಾಸಕಾರಿಗ ಆಯ್ಕೆಯಾದ ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಸತತ ಗೆಲವು ದಾಖಲಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇದೇ ಕಾರಣಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಯ ಸದನ ನಾಯಕರಾಗಿಯೂ ಕೆಲಸ ಮಾಡಿದ್ದಾರೆ.
ಇವರ ಪುತ್ರ ಶ್ರೀಕಾಂತ್ ಶಿಂಧೆ, ಶಿವಸೇನೆಯಿಂದಲೇ ಸಂಸದರಾಗಿ ಆಯ್ಕೆಯಾಗಿದ್ದಾರೆ
Discussion about this post